Wednesday 26 July 2017

ವ್ಯಾಕುಲ

ವ್ಯಾಕುಲ
"ಮೂಕಾಂಬಿಕಾ......",ಹಿರಿಯ ವ್ಯವಸ್ಥಾಪಕಿ ಸುನಂದ ಕರೆದಾಗ ಸರತಿ ಸಾಲಿನಲ್ಲಿ ಕುಳಿತಿದ್ದ ನಾಲ್ಕಾರು ಯುವತಿಯರಲ್ಲಿ ಒಬ್ಬಳು ಆಕೆಯ ಕೋಣೆಗೆ ಹೋದಳು.ಕೋಣೆಯಲ್ಲಿ ಹಾಕಿದ್ದ ಕುರ್ಚಿಯ ಮೇಲೆ ಕುಳಿತಿದ್ದ ಶ್ರೀಮಂತ ದಂಪತಿಯ ಎದುರಿಗೆ ಹೋಗಿ ತನ್ನ ಎರಡು ಕೈಗಳನ್ನು ಜೋಡಿಸಿ ನಮಸ್ಕಾರ ಮಾಡಿದಳು."ಇವಳು ಮೂಕಾಂಬಿಕಾ.....ಈಕೆಯದೇ ನಿಮ್ಮ ಮಗುವನ್ನು ಹೆರಬಹುದಾದ ಸೂಕ್ತ ಗರ್ಭ....ಒಪ್ಪಿಗೆಯಿದ್ದಲ್ಲಿ ಮುಂದಿನದನ್ನು ಮಾತನಾಡೋಣ.." ಎಂಬ ಸುನಂದಾಳ ಮಾತಿಗೆ,ಮೂಕಾಂಬಿಕೆಯನ್ನೊಮ್ಮೆ ನೋಡಿದ ಸಿರಿವಂತರು ಒಪ್ಪಿಗೆ ಎಂಬಂತೆ 'ಆಲಯ' ದ ವ್ಯವಸ್ಥಾಪಕಿಯ ಕಡೆಗೆ ತಿರುಗಿ ತಲೆಯಲ್ಲಾಡಿಸಿದರು."ನೀನಿನ್ನು ಹೋಗಬಹುದು..." ಎಂದ ಸುನಂದಾ "ಹಾಗೆಯೇ ನಿನ್ನ ಗೆಳತಿಯರನ್ನು ಅವರವರ ಕೋಣೆಗೆ ಹೋಗೋದಕ್ಕೆ ಹೇಳು.." ಎಂದೂ ಸೇರಿಸಿದಳು.
ಮೂಕಾಂಬಿಕೆ,ಸುಮಾರು ಇಪ್ಪತ್ತಾರು ವರ್ಷದ ಹೆಣ್ಣುಮಗಳು.ಎಣ್ಣೆಗಪ್ಪು ಮೈಬಣ್ಣ,ಆಕರ್ಷಕವಾದ ಕಣ್ಣುಗಳು,ತುಂಬಿಕೊಂಡ ಕೆನ್ನೆಗಳು ಇವೆಲ್ಲಕ್ಕೂ ಮುಕುಟವೇನೋ ಎಂಬಂತಹ ಆಕೆಯ ಮುಗ್ದವಾದ ಮುಗುಳುನಗೆ.ಇದೆಲ್ಲಕ್ಕಿಂತ ಹೆಚ್ಚಾಗಿ ಫಲವತ್ತಾದ ಆರೋಗ್ಯಕರ ಗರ್ಭ.ಆಕೆಯಲ್ಲಿ ಅದಾಗಲೇ ಹುಟ್ಟಿದ್ದ ಎರಡು ಸಿರಿವಂತರ ಜೀವಗಳು ಗಟ್ಟಿಮುಟ್ಟಾಗಿದ್ದವು.'ಆಲಯ' ದಲ್ಲಿ ಇದ್ದ ಬಾಡಿಗೆ ತಾಯಂದಿರಲ್ಲಿ ಒಬ್ಬಳು.ಮೇಲಾಗಿ ಬಹುಬೇಡಿಕೆಯ ಹಾಗೂ ಸ್ವಲ್ಪ ಹೆಚ್ಚೇ ದುಬಾರಿಯೆಂದೆನಿಸುವ ತಾಯಿ.
ಮೂರು ವರ್ಷಕ್ಕೆ ಒಂದು ಮಗುವನ್ನು ಹೆರುತ್ತಿದ್ದಳು ಮೂಕಾಂಬಿಕೆ.ಸದಾ ಅಂತರ್ಮುಖಿ.ಯಾರೊಡನೆಯೂ ಹೆಚ್ಚು ಮಾತಿಲ್ಲ.ಗರ್ಭ ಧರಿಸಿ ಮೂರು ತಿಂಗಳ ಅನಂತರದ ಒಂದು ವರ್ಷಗಳ ಕಾಲ,ಆಕೆಗೆ ರಾಜಾತಿಥ್ಯ.ಹುಟ್ಟುವ ಮಗು ಆರೋಗ್ಯವಾಗಿರಬೇಕು ಎಂಬ ಉದ್ದೇಶದಿಂದ ಆಕೆಗೆ ಬಸಿರಿನ ಕಾಲದಲ್ಲಿ ಹಣ್ಣು ಹಂಪಲನ್ನು ಯಥೇಚ್ಛವಾಗಿ ಕೊಡುತ್ತಿದ್ದರು.ಮಗುವಿನ ಜನನದ ನಂತರ ಮತ್ತದೇ ರೀತಿಯ ಉಪಚಾರ.ಆದರೆ ಈ ಬಾರಿ ಮೊಲೆಯಲ್ಲಿ ಯಥೇಚ್ಛವಾಗಿ ಹಾಲು ದೊರೆಯಬೇಕೆಂಬ ಉದ್ದೇಶದಿಂದ.ಎರಡೂ ಹಂತದಲ್ಲಿ ಪ್ರಧಾನವಾದದ್ದು ಆಕೆಯ ಗರ್ಭವೇ ಹೊರತು ಆಕೆಯಲ್ಲ.ಮಿಥುನದ ಸುಖವೇ ಇಲ್ಲದೆ ತಾಯ್ತನದ ತಿಳಿಯಾದ ಆನಂದವನ್ನು ಅನುಭವಿಸುತ್ತಿದ್ದಳು ಮೂಕಾಂಬಿಕೆ.ಸುಮಾರು ಎಂಟು ತಿಂಗಳು ತನ್ನ ರಕ್ತವನ್ನು ಹಾಲಾಗಿ ಬಸಿದು ಎಳೆ ಕಂದಮ್ಮಗಳ ಹೊಟ್ಟೆ ತುಂಬಿಸಿ,ಒಂಬತ್ತನೆ ತಿಂಗಳು ಆ ಎಳೆ ಜೀವವನ್ನು ಅದರ ನಿಜವಾದ ವಾರಸುದಾರರಿಗೆ ಕೊಡುವಾಗ,ಆಕೆಯ ಕರುಳು ಕಿತ್ತು ಬರುತ್ತಿತ್ತು.ಆದರೆ ಅದು ತನ್ನ ಕರ್ತವ್ಯ ಎಂದುಕೊಂಡು ಆಕೆ ಒಬ್ಬಳೆ ಮರುಗಿ ಸುಮ್ಮನಾಗುತ್ತಿದ್ದಳು.
'ಆಲಯ'ದಲ್ಲಿ ಬಾಡಿಗೆ ತಾಯಿಯಾಗಿದ್ದವರು ಒಮ್ಮೆ ಮಗುವನ್ನು ಹೆತ್ತು ಕೊಟ್ಟ ಮೇಲೆ ಮತ್ತೆ ಆ ಮಗುವಿನ ಮುಖ ನೋಡಬಾರದೆಂಬ ಷರತ್ತನ್ನು ಹೊಂದಿದ ಲಿಖಿತ ಅಗ್ರಿಮೆಂಟೊಂದನ್ನು ಸಹಿ ಮಾಡಬೇಕಿತ್ತು.ಅದರಲ್ಲಿ ಇನ್ನು ಎಷ್ಟೋ ಷರತ್ತುಗಳು ಇದ್ದವಂತೆ,ಆದರೆ ಮೂಕಾಂಬಿಕೆಗೆ ಇಷ್ಟು ಮಾತ್ರ ಹೇಳಲಾಗಿತ್ತು.ಓದು-ಬರಹ ಬರದ ಆಕೆ,ತನ್ನ ಬೆರಳಚ್ಚನ್ನು ಅಂತಹ ಕಾಗದಗಳಿಗೆ ಸಹಿಯ ರೂಪದಲ್ಲಿ ನೀಡುತ್ತಿದ್ದಳು.
ಹೆರಿಗೆಯ ನೋವನ್ನು ಅನುಭವಿಸುವ ಧೈರ್ಯವಿಲ್ಲದೆಯೋ,ಅಥವಾ ಮಗು ಹೆರಲು ಸಮಯವಿಲ್ಲದೆಯೋ ಏನೋ,ತಮ್ಮ ಮಗುವನ್ನು ಬೇರೆಯವರ ಗರ್ಭದಲ್ಲಿ ಬೆಳೆಸುವ ಸಿರಿವಂತರ ಪಾಲಿನ ತಾಯಿ ಮೂಕಾಂಬೆ.ಆಕೆಗೆ ತನ್ನ ತಂದೆ-ತಾಯಿಯರು ಮೂಕಾಂಬೆ ಎಂಬ ಹೆಸರನ್ನು ಯಾಕಾಗಿ ಇಟ್ಟರೋ ಗೊತ್ತಿಲ್ಲ.ಆದರೆ ಆಕೆಗೆ ಮಾತ್ರ ಆ ಹೆಸರು ಅನ್ವರ್ಥವೇನೋ ಎಂಬಂತೆ ಇತ್ತು.ಯಾರೊಡನೆಯು ಹೆಚ್ಚು ಮಾತಿಲ್ಲ.ಎಲ್ಲಿಯೂ ತನ್ನ ಭಾವನೆಗಳನ್ನು ವ್ಯಕ್ತಪಡಿಸುತ್ತಿರಲಿಲ್ಲ.ಪ್ರತಿ ಬಾರಿ ಬಸುರಿಯಾದಾಗಲೂ,ಅದು ತನ್ನದೇ ಮಗು ಎಂಬಂತಹ ಅವ್ಯಕ್ತ ಭಾವ.ಕೋಗಿಲೆಯು ತನ್ನ ಮರಿಯನ್ನು ಪೋಷಿಸುವ ಮನಸ್ಸಿಲ್ಲದೆ ಅದನ್ನು ಕಾಗೆಯ ಗೂಡಿನಲ್ಲಿ ಇಡುವುದಂತೆ.ಇದನ್ನು ಅರಿಯದ ಕಾಗೆ ಅದು ತನ್ನದೆ ಮೊಟ್ಟೆ ಎಂದು ಅರಿತು ಕಾವು ಕೊಟ್ಟು ಮರಿ ಮಾಡುವುದಂತೆ,ಅದೇ ರೀತಿ ಮೂಕಾಂಬಿಕೆಯ ಪರಿಸ್ಥಿತಿಯೂ ಕೂಡ.ಆದರೆ ಈಕೆಗೆ ಅದು ತನ್ನ ಮಗುವಲ್ಲ ಎಂಬ ಅರಿವು ಸ್ಪಷ್ಟವಾಗಿತ್ತು.
***************************************
ತಾನು ದುಡಿದ ದುಡ್ಡನ್ನೆಲ್ಲ ಸಾರಾಯಿ ಅಂಗಡಿಗೆ ಹಾಕಿ ಕುಡಿದು ಬರುತ್ತಿದ್ದ ಮೂಕಾಂಬಿಕೆಯ ತಂದೆ ಬೀರಣ್ಣ.ಕುಡಿದ ಮತ್ತಿನಲ್ಲಿ ತನ್ನ ಹೆಂಡತಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ,ಹೆಣ್ಣು ಹೆತ್ತಿದ್ದಕ್ಕಾಗಿ ಹೊಡೆಯುತ್ತಿದ್ದ.ಆಕೆಯ ತಾಯಿ ದ್ಯಾಮವ್ವ ಪೆಟ್ಟನ್ನು ಸಹಿಸಿಕ್ಕೊಳ್ಳುವಷ್ಟು ಸಹಿಸಿಕೊಂಡು ಆಮೇಲೆ ಮೂಲೆಯಲ್ಲಿದ್ದ ಪೊರಕೆಯನ್ನು ತೆಗೆದುಕೊಂಡು ಬಾಸುಂಡೆ ಬರುವಂತೆ ಗಂಡನಿಗೆ ಬಾರಿಸುತ್ತಿದ್ದಳು."ನಾನೇನು ಸತಿ ಸಾವಿತ್ರಿ ಅಲ್ಲ ತಿಳ್ಕ....ನಂಗೆ ಹೊಡಿತೀಯ ಬೇವರ್ಸಿ...." ಎಂದು ಸಿಕ್ಕಸಿಕ್ಕದ್ದರಲ್ಲಿ ಆತನ ಕುಡಿದ ನಶೆ ಇಳಿಯುವಂತೆ ಹೊಡೆಯುತ್ತಿದ್ದಳು.ಓದು-ಬರಹ ಬಾರದ ತಂದೆ-ತಾಯಿಯರಿಗೆ ಇದ್ದ ಒಬ್ಬ ಮಗಳನ್ನು ಓದಿಸುವ ಮನಸ್ಸು ಇಲ್ಲ.ಬೇರೆಯವರ ಮನೆಯ ಮುಸುರೆ ತಿಕ್ಕುವ ಹುಡುಗಿಯನ್ನು ಶಾಲೆಗೆ ಕಳುಹಿಸುವುದು ಹಾದರ ಮಾಡಿದಂತೆ ಎಂದು ನಂಬುತ್ತಿದ್ದವರು ದ್ಯಾಮವ್ವ ಹಾಗೂ ಬೀರಣ್ಣ.
ಅದೊಂದು ದಿನ ಕೂಲಿ ಕೆಲಸದಿಂದ ಬಂದ ತಾಯಿ-ಮಗಳು ನೋಡಿದಾಗ,ಬೀರಣ್ಣ ರಕ್ತ ಕಾರಿಕೊಂಡು ಸತ್ತು ಬಿದ್ದಿದ್ದ.ಅದೆಲ್ಲಿಯ ಕಳ್ಳಭಟ್ಟಿಯನ್ನು ಕುಡಿದು ಬಿದ್ದಿದ್ದನೋ ಗೊತ್ತಿಲ್ಲ.ಇದ್ದೊಂದು ಪೀಡೆ ತೊಲಗಿತು ಎಂಬ ಭಾವ ದ್ಯಾಮವ್ವನಿಗೆ.ಅಪ್ಪನನ್ನು ಅಷ್ಟಾಗಿ ಹಚ್ಚಿಕ್ಕೊಳ್ಳದ ಮೂಕಾಂಬೆಗೂ ಏನೂ ಅನಿಸಲಿಲ್ಲ.ಕಾಲಕ್ರಮೇಣ ದ್ಯಾಮವ್ವ ಆ ಊರ ಜಮೀನ್ದಾರನಿಗೆ ಸುಖ ಕೊಡುವ ಸರಕಾದಳು.ಆತ ಕೊಡುತ್ತಿದ್ದ ಅಷ್ಟಿಷ್ಟು ಕಾಸಿನಲ್ಲಿ ತಾಯಿ ಮಗಳು ಹೊಟ್ಟೆ ತುಂಬಾ ಊಟ ಮಾಡುತ್ತಿದ್ದರು.ಆದರೆ ಜಮೀನ್ದಾರ ಒಂದು ದಿನ ಮೂಕಾಂಬೆಯ ಮೇಲೂ ಕಣ್ಣು ಹಾಕಿದ್ದ.ಈ ವಿಷಯ ದ್ಯಾಮವ್ವನಿಗೆ ತಿಳಿದಿದ್ದರು ಆಕೆಯದು ಜಾಣ ಕುರುಡುತನ.ತನ್ನ ತಾಯಿಯ ಹಾದಿ ಹಿಡಿಯಲು ಬಯಸದ ಮೂಕಾಂಬೆ,ರಾತ್ರೋರಾತ್ರಿ ಊರು ಬಿಟ್ಟು ಬಂದಿದ್ದಳು.ಹಾಗೆ ಊರು ಬಿಟ್ಟು ಬಂದ ಮೂಕಾಂಬೆಗೆ ಸೂರಾಗಿದ್ದು 'ಆಲಯ'.
  *******************************************
'ಮೂಕವ್ವ.....",ಎಂದು ಬಾಣಂತನದ ಆರೈಕೆಯಲ್ಲಿದ್ದ ಹುಡುಗಿಯೊಬ್ಬಳು ಕರೆದಾಗ,ಪಕ್ಕದ ಕೋಣೆಯಿಂದ ಮೂಕಾಂಬೆ ಓಡಿ ಬಂದಳು.ಸುಮಾರು ಎಂಟು ಮಕ್ಕಳನ್ನು ಹೆತ್ತ ಮೂಕಾಂಬಿಕೆ ಈಗ ಬಾಡಿಗೆ ತಾಯಿಯ ಹುದ್ದೆಯಿಂದ ನಿವೃತ್ತಿ ಪಡೆದ್ದಿದ್ದಾಳೆ.ನಿವೃತ್ತಿ ಪಡಿದ್ದಿದ್ದಾಳೆ ಅನ್ನುವುದಕ್ಕಿಂತ,ಆಕೆಯನ್ನು ಆ ಹುದ್ದೆಯಿಂದ ಮೊಟಕುಗೊಳಿಸಿದ್ದಾರೆ.ಇದೀಗ ಆಕೆ ಬಾಡಿಗೆ ತಾಯಂದಿರನ್ನು ನೋಡಿಕೊಳ್ಳುವ ಹಿರಿಯ ಸೇವಕಿ.ವಯಸ್ಸು ನಲವತ್ತೈದರ ಸಮೀಪವಿರಬಹುದು.ಆದರೂ ಆಕೆಯ ಮುಖ ನೋಡಿದರೆ ವಯಸ್ಸಿಗಿಂತ ಹತ್ತು ವರ್ಷ ದೊಡ್ಡವಳಂತೆ ಕಾಣುತ್ತಿದ್ದಳು.ಎರಡು ಬಾಡಿಗೆ ತಾಯಂದಿರ ಜವಬ್ದಾರಿ ಹೊತ್ತ ಮೂಕವ್ವನಿಗೆ 'ಆಲಯ'ದಲ್ಲಿ ಜಾಗವಿಲ್ಲ.ಬೆಳಗ್ಗೆ ಆರು ಗಂಟೆಯಿಂದ ಸಂಜೆ ಆರರವರೆಗೆ ಕೆಲಸ.ಆ ನಂತರ ಒಂದೆರಡು ಮೈಲಿ ನೆಡೆದು ಹೋಗಿ ತನ್ನ ಬಾಡಿಗೆ ಕೋಣೆ ಸೇರುತ್ತಿದ್ದಳು.ವಾರದಲ್ಲಿ ಒಂದು ದಿನ ರಜೆ.
ಮೂಕಾಂಬಿಕೆಗೆ ಇತ್ತೀಚೆಗೆ ಮನಸ್ಸಿನಲ್ಲಿ ಅದೇನೋ ತಲ್ಲಣ.ಒಂದು ರೀತಿಯ ವ್ಯಾಕುಲತೆ ಆಕೆಯ ಮನಸ್ಸನ್ನು ಆವರಿಸಿತ್ತು.ಆಕೆಯ ಬದುಕಿನಲ್ಲಿ ಎಲ್ಲೂ ಆಕೆಯ ಭಾವನೆಗಳಿಗೆ ಬೆಲೆ ಇರಲಿಲ್ಲ,ಆಸೆಗಳಿಗೆ ಪುರಸ್ಕಾರವಿರಲಿಲ್ಲ.ಸುಪ್ತ ಮನಸ್ಸಿನಲ್ಲಿ ಅಡಗಿದ್ದ ನಿರ್ದಯಿ ಭಾವಗಳು ಇದೀಗ ಪ್ರಕಟಗೊಂಡು ಅವಳನ್ನು ಹಿಂಡುತ್ತಿದ್ದವು.ಆಕೆಗೆ ಆಕೆಯ ಬದುಕಿನ ರೀತಿಯ ಬಗೆಗೆ ಸಂಶಯ.ತಾಯ್ತನವನ್ನು ಪೂರ್ಣವಾಗಿ ಅನುಭವಿಸಬೇಕೆನ್ನುವ ಹಂಬಲ ಬಹಳವಾಗಿ ಕಾಡುತ್ತಿದೆ.ದಾರಿಯಲ್ಲಿ ಹೋಗುವ ಯುವಕ-ಯುವತಿಯರನ್ನು ನೋಡುತ್ತಾ ತನ್ನ ಹೊಟ್ಟೆಯಲ್ಲಿ ಹುಟ್ಟಿದವುಗಳು ಇಷ್ಟೇ ದೊಡ್ಡವರಾಗಿರಬಹುದು ಎಂದೆನಿಸುತ್ತಿತ್ತು.ತಾನು ಎಂಟು ಮಕ್ಕಳನ್ನು ಹೆತ್ತರೂ ಆ ಮಕ್ಕಳ ಬಾಲ್ಯವನ್ನು ತಾನು ಕಾಣಲಿಲ್ಲವಲ್ಲ ಎಂಬ ಯಾತನೆ.ಅದೇಕೆ ತನಗೆ ಈ ವಯಸ್ಸಿನಲ್ಲಿ ಈ ರೀತಿಯ ಚಿಂತೆಗಳು ಕಾಡುತ್ತಿವೆ ಎಂಬುದು ಸ್ವತಃ ಆಕೆಗೆ ತಿಳಿದಿಲ್ಲ.ಒಂದೊಮ್ಮೆಯಂತೂ ತಾನು ವ್ಯಭಿಚಾರ ಮಾಡಿಬಿಟ್ಟೆನೇನೋ ಎಂದೆನಿಸಿ "ಥೂ...." ಎಂದು ತನ್ನ ಬಗ್ಗೆ ತಾನೇ ಅಸಹ್ಯ ಪಡುತ್ತಿದ್ದಳು.ತನಗೂ ಒಂದು ಒಳ್ಳೆಯ ಕುಟುಂಬವಿದ್ದರೆ ಬಹುಶಃ ತಾನು ನಾಲ್ಕರು ಮಕ್ಕಳನ್ನು ಹೆತ್ತು ಮರ್ಯಾದೆಯ ಜೀವನ ಬದುಕಬಹುದಿತ್ತು.ಈ ರೀತಿಯ ಗರ್ಭವನ್ನು ಮಾರಿ ಬದುಕಿದ್ದು ಹೇಸಿಗೆ ಎನಿಸುತ್ತಿತ್ತು.ಆದರೆ ಮರುಕ್ಷಣದಲ್ಲಿಯೇ ತನ್ನ ಹೊಟ್ಟೆಯನ್ನು ಮುಟ್ಟಿಕೊಂಡು,ತಾನೊಬ್ಬ ಪವಿತ್ರವಾದ ತಾಯಿ ಎಂದೆನಿಸಿ ಮನಸ್ಸು ಸಂತೋಷಿಸುತ್ತಿತ್ತು.ಮುದ್ದು ಮುಖದ ಎಳೆಯ ಕಂದಮ್ಮಗಳು ಈಕೆಯ ಮೊಲೆಯ ಹಾಲನ್ನು ತೃಪ್ತಿಯಾಗುವಷ್ಟು ಉಂಡು ಕಣ್ಣು ಮುಚ್ಚಿ ಸುಖ ನಿದ್ರೆ ಮಾಡುತ್ತಿದ್ದ ಆ ನೆನಪುಗಳು ಜಾಗೃತವಾದಾಗ ಮೂಕಾಂಬೆಯ ಮನಸ್ಸು ಪ್ರಪುಲ್ಲವಾಗುತ್ತಿತ್ತು.ತಾನೊಂದು ಆನಾಥಶ್ರಮವನ್ನು ಸೇರಿ,ಅಲ್ಲಿರುವ ಎಳೆಯ ಕಂದಮ್ಮಗಳ ಬಾಲ್ಯವನ್ನು ಕಂಡು ಸಂಪೂರ್ಣ ಮಾತೃತ್ವವನ್ನು ಪಡೆಯುವ ಅದಾಗಲೇ ಚಿಗುರೊಡೆದ ಆಲೋಚನೆ ಇದೀಗ ಹೆಮ್ಮರವಾಗಿತ್ತು.ತಡ ಮಾಡದೇ 'ಆಲಯ'ಕ್ಕೆ ತಾನು ಬರುವುದಿಲ್ಲವೆಂಬ ತನ್ನ ನಿರ್ಧಾರವನ್ನು ಹೇಳಿದ್ದಳು.
ಸಂಜೆ ಆರರ ಸುಮಾರಿಗೆ,'ಆಲಯ' ದಲ್ಲಿಯ ತನ್ನ ಕಡೆಯ ದಿನವನ್ನು ಮುಗಿಸಿ ತನ್ನ ಪುಟ್ಟ ಮನೆಯತ್ತ ಹೆಜ್ಜೆ ಹಾಕಿದಳು.ಮನಸ್ಸು ತಿಳಿಯಾಗಿತ್ತು.ಮನೆಗೆ ಬಂದವಳೇ ಎಂದಿನಂತೆ ಕೈಕಾಲು ಮುಖ ತೊಳೆದು ದೇವರಿಗೆ ದೀಪ ಹಚ್ಚಿದಳು.ದೇವಿಯ ಮುಖವನ್ನೊಮ್ಮೆ ನೋಡಿದಾಗ ಆ ಪೋಟೋದಲ್ಲಿದ್ದ ಗಾಜಿನಲ್ಲಿ ತನ್ನದೇ ಮುಖ ಕಂಡಾಗ ಮೂಕಾಂಬಿಕೆ ಬೆಚ್ಚಿಬಿದ್ದಳು.ಮರುಕ್ಷಣದಲ್ಲಿಯೇ ತಾನೇ ಜಗವನ್ನು ಸಲಹುವ ಜಗನ್ಮಾತೆಯ ಸ್ವರೂಪ.ಮಾತೃತ್ವದ ಸ್ವರೂಪ.ತನ್ನದಲ್ಲದ ಮಗುವನ್ನು ತನ್ನ ಗರ್ಭದಲ್ಲಿ ರಕ್ಷಿಸಿದ್ದ ತಾನೊಂದು ಶಕ್ತಿ ಸ್ವರೂಪ ಎಂದೆನಿಸಿತು ಆಕೆಗೆ.ಮನದೊಳಗೆ ಹುದುಗಿದ್ದ ಭಾವಗಳು ಇದೀಗ ಸ್ಪಷ್ಟವಾಗಿತ್ತು.ತನ್ನ ಆನಾಥ ಮಕ್ಕಳ ಪಾಲನೆಯ ನಿರ್ಧಾರ ಆಕೆಗೆ ಹೆಮ್ಮೆ ಎಂದೆನಿಸಿತು.ಮರುದಿನವೇ ಯಾವುದಾದರೂ ಆನಾಥಾಶ್ರಮವನ್ನು ಸೇರಿ ತಾಯಿಯ ಪ್ರೀತಿ ಕಾಣದ ಮುದ್ದು ಮಕ್ಕಳಿಗೆ ತಾಯಿಯಾಗಬೇಕು.ಆಕೆಯ ಮನಸ್ಸಿನಲ್ಲಿ ಎದ್ದಿದ್ದ ಬಿರುಗಾಳಿ,ತಂಗಾಳಿಯಾಗಿ ಪರಿವರ್ತನೆಯಾಗಿದೆ. "ದ್ಯಾವಿ...." ಎಂದು ತನ್ನ ಹೊಟ್ಟೆಯನ್ನೊಮ್ಮೆ ಹಿಡಿದುಕೊಂಡಳು.ವಿಪರೀತ ನೋವು.ಸುಮಾರು ದಿನಗಳಿಂದ ಇಂತಹ ನೋವು ಆಕೆಯನ್ನು ಪದೇ ಪದೇ ಬಾಧಿಸುತ್ತಿತ್ತು.ಆದರೂ ಆಕೆ ಅದರೆಡಗೆ ಗಮನ ಕೊಡದೇ ಅದು ಯವುದೋ ನೋವುನಿವಾರಕ ಗುಳಿಗೆ ನುಂಗುತ್ತಿದ್ದಳು.ಆದರೆ ಈ ಬಾರಿ ವಿಪರೀತ ನೋವು.ತಾನು ಹೆತ್ತ ಎಂಟು ಮಕ್ಕಳಲ್ಲಿ ಯಾವ ಮಕ್ಕಳೂ ಹೊರಗೆ ಬರುವಾಗ ಇಂತಹ ನೋವುಂಡ ನೆನಪಿಲ್ಲ ಅಥವಾ ಅದನೊಂದು ಸುಖ ಎಂದುಕೊಂಡ ಆಕೆಗೆ ಆ ನೋವು ನಾಟಿರಲಿಲ್ಲ.ಆದರೆ ಇದು ಅಸಾಧ್ಯವಾದ ನೋವು."ಅಯ್ಯೋ........" ಎಂದು ಚೀರಿಕೊಂಡು ನೆಲದ ಮೇಲೆ ಕುಸಿದಳು.
ದೇವರ ಮುಂದೆ ಹಚ್ಚಿದ ದೀಪ ನಂದಿ ಹೋಯಿತು.ತಾನೊಂದು ಪರಿಪೂರ್ಣ ತಾಯಾಗಬೇಕು ಎಂದಿದ್ದ ಮೂಕಾಂಬಿಕೆಯ ಆಸೆ ಮೂಕಾವಾಗಿಯೆ ಆಕೆಯೊಡನೆ ಸಮಾಧಿಯಾಗಿತ್ತು

Tuesday 6 June 2017

ಮಿಡಿ ಉಪ್ಪಿನಕಾಯಿ ಪುರಾಣ

ಮಿಡಿ ಉಪ್ಪಿನಕಾಯಿ ಪುರಾಣ
ಊಟದ ಜೊತೆಗೆ ಉಪ್ಪಿನಕಾಯಿ ಇರಬೇಕು ಎಂಬ ನಿಯಮವೇನೂ ಇಲ್ಲದ್ದಿದ್ದರೂ,ಉಪ್ಪಿನಕಾಯಿ ಇದ್ದರಂತೂ ಊಟದ ಮಜವೇ ಬೇರೆ.ಅದರಲ್ಲೂ ತನ್ನ ಪರಿಮಳದಿಂದಲೇ ಹೆಸರುವಾಸಿಯಾಗಿರುವ ಅಪ್ಪೆ ಮಿಡಿಯ ಉಪ್ಪಿನಕಾಯಿ ಇದ್ದರಂತೂ ಊಟದ ಗಮ್ಮತ್ತೇ ಬೇರೆ.ಆ ಪರಿಮಳಕ್ಕೆ ಒಂದೆರಡು ತುತ್ತು ಅನ್ನ ಜಾಸ್ತಿಯೇ ಸೇರುತ್ತದೆ.ಮಲೆನಾಡಿನ ನಿತ್ಯಹರಿದ್ವರ್ಣದ ಕಾಡುಗಳಲ್ಲಿಯೇ ಹೆಚ್ಚಾಗಿ ಬೆಳೆಯುವ ಈ ಅಪ್ಪೆ ಮಿಡಿಯ ಸೊಗಸನ್ನು,ಸೊಬಗನ್ನು ಬಲ್ಲವನೇ ಬಲ್ಲ.ಅಪ್ಪೇ ಮಿಡಿಯಲ್ಲಿ ಸಾಕಷ್ಟು ಖಾದ್ಯಗಳನ್ನು ತಯಾರಿಸಬಹುದಾದರೂ ಈ ಮಿಡಿಯ ಉಪ್ಪಿನಕಾಯಿಗೆ ಹೆಚ್ಚು ಪ್ರಾಶಸ್ತ್ಯ.
ಬಾಲ್ಯದ ಬೇಸಿಗೆಯಲ್ಲಿ ಅಜ್ಜಿಯ ಮನೆಗೆ ಹೋದಾಗ ಬೇಲಿಯ ಬದಿಯ ಕಾಟು ಮಾವಿನ ಎಳೆಯ ಕಾಯಿಗಳನ್ನು ಹೆಕ್ಕಿ ಅದನ್ನು ಅಪ್ಪೆ ಮಿಡಿಯೆಂದು ಭಾವಿಸಿ ಮನೆಗೆ ತಂದಾಗ,ಅದು ಯಾವುದೋ ಕಾಟು ಮಿಡಿ ಎಂದು ಅಮ್ಮ ಹಾಗೂ ಅಜ್ಜಿ ಇಬ್ಬರೂ ಅದನ್ನು ತೆಂಗಿನ ಕಟ್ಟೆಗೆ ಬಿಸಾಡುತ್ತಿದ್ದುದ್ದನ್ನು ನೆನಪಿಸಿಕೊಂಡರೆ,ಈಗ ನಗು ಬರುತ್ತದೆ.ಅಷ್ಟೇ ಅಲ್ಲದೆ ಬೇಲಿಗಳಲ್ಲಿ ಸಂಚರಿಸಿದ್ದಕ್ಕಾಗಿ ಮಂಗಳಾರತಿಯು ಆಗುತ್ತಿತ್ತು.ಜೊತೆಗೆ ಬೇಲಿ ಬದಿಯಲ್ಲಿ ಹಾವುಗಳು ಇರುತ್ತದೆ,ಸತ್ತವರು ಪ್ರೇತಗಳಾಗಿ ಓಡಾಡುತಿರುತ್ತಾರೆ ಎಂದೆಲ್ಲ ಹೆದರಿಸುವ ಪ್ರಯತ್ನಗಳು ನೆಡೆಯುತ್ತಿದ್ದವು.ಇಷ್ಟೆಲ್ಲಾ ಮಾತುಗಳನ್ನು ಕೇಳಬೇಕಾದದ್ದು ಅಪ್ಪೇ ಮಿಡಿಯ ಬಗೆಗೆ ನಮಗಿದ್ದ ಆಸೆಯಿಂದಲೇ ಆಗಿತ್ತು.
ಅಪ್ಪೆ ಮಿಡಿಯ ಉಪ್ಪಿನಕಾಯಿಯನ್ನು ಮಾಡುವುದು ಸಂರಕ್ಷಿಸುವುದು ಎರಡೂ ಕೂಡ ಬಾಣಂತಿಯರನ್ನು ನೋಡಿಕೊಂಡಂತೆ.ಸಾಕಷ್ಟು ನಿಯಮಗಳನ್ನು ಹೊಂದಿದ ಒಂದು ಕಠಿಣ ವ್ರತದಂತೆ ಮಿಡಿ ಉಪ್ಪಿನಕಾಯಿಯ ತಯಾರಿ ನೆಡೆಯುತ್ತಿತ್ತು.ಬಂದ ರಾಶಿ ಮಿಡಿಗಳಲ್ಲಿಯ ಎಲೆಗಳನ್ನು ತೆಗೆಯುವುದು ಮಾತ್ರ ನಮ್ಮ ಕೆಲಸ.ಕೆಲವೊಮ್ಮೆ ಹಾಳಾದ ಮಿಡಿಗಳನ್ನು ಬೇರ್ಪಡಿಸುವುದನ್ನೂ ಮಾಡುತ್ತಿದ್ದೆವು.ಆಗ ಮಾತ್ರ ನನ್ನ ಅಜ್ಜಿಯನ್ನು ಸಾವಿರ ಪ್ರಶ್ನೆ ಕೇಳುತ್ತಿದ್ದೆವು."ಇದು ಸರಿವುಂಟಾ...?" ಎಂದು ಹತ್ತು ಮಿಡಿಗಳಿಗೆ ಒಮ್ಮೆಯಾದರೂ ಕೇಳುತ್ತಿದ್ದೆವು.ಇದಾದ ಮೇಲೆ ಅದನ್ನು ಒಂದಷ್ಟು ದಿನ ಉಪ್ಪಿನಲ್ಲಿ ಒತ್ತಿ ಇಟ್ಟು,ತದನಂತರ ಅದಕ್ಕೆ ಬೇಕಾದ ಮಸಾಲೆಯನ್ನು ರುಬ್ಬಿ,ನೀರು ತಾಗದಂತೆ ಕಾಪಾಡಿಕೊಂಡ ಮಿಡಿಗಳಿಗೆ ಅವುಗಳನ್ನು ಬೆರೆಸಿ ಉಪ್ಪಿನಕಾಯಿ ತಯಾರಿಸಲಾಗುತ್ತಿತ್ತು.ಹಾಗೆ ತಯಾರಿಸಿದ ಉಪ್ಪಿನಕಾಯಿ ಮರುವರ್ಷದಿಂದ ಬಳಕೆಗೆ ಜಾರಿಯಾಗುತ್ತಿತ್ತು.ಹೀಗೆ ಮಾಡಿಟ್ಟ ಉಪ್ಪಿನಕಾಯಿಯನ್ನು ದೊಡ್ಡ ಪಿಂಗಾಣಿ ಭರಣಿಗಳಲ್ಲಿ ಗಾಳಿ-ನೀರು ತಾಗದಂತೆ ಇಡಲಾಗುತ್ತಿತ್ತು.ಹೀಗೆ ಒಂದಕ್ಕಿಂತ ಹೆಚ್ಚು ವರ್ಷ ಕತ್ತಲ ಸೆರೆಮನೆಯಲ್ಲಿ ಶಿಕ್ಷೆ ಅನುಭವಿಸಿದ ಉಪ್ಪಿನಕಾಯಿ ಮಾತ್ರ ಬಳಕೆಗೆ ಯೋಗ್ಯ.
ಕೆಲವೊಮ್ಮೆ ನೀರಿನ ಕೈಯಲ್ಲಿ ಮುಟ್ಟಿದರೆ ಉಪ್ಪಿನಕಾಯಿಯಲ್ಲಿ ಹುಳ ಬರುವುದೂ ಉಂಟು.ಹೀಗೆ ಒಂದೊಮ್ಮೆ ನಮ್ಮ ನೆರೆಮನೆಯ ಚಿಕ್ಕ ಹುಡುಗ ಆಟದಿಂದ ಬಂದವನೇ ಕೈ ಸರಿಯಾಗಿ ಒರೆಸಿಕ್ಕೊಳ್ಳದೇ ಮಿಡಿ ತಿನ್ನುವ ತೊಡುವಿನಲ್ಲಿ,ಜಾಡಿಗೆ ಕೈ ಹಾಕಿದ್ದಾನೆ.ಪರಿಣಾಮ ಒಂದು ತಿಂಗಳಲ್ಲೇ ಜಾಡಿಯೊಳಗೆ ಹುಳ.ಪಾಪ ಹುಡುಗನ ತಾಯಿ ಉಪ್ಪಿನಕಾಯಿ ಹಾಳಾಯಿತೆಂದು ರೋದಿಸಿದ್ದು ಅಷ್ಟಿಷ್ಟಲ್ಲ.ಮಗನಿಗೆ ಸರಿಯಾಗಿ ಬೈದು ಹೊಡೆದು ಮಾಡಿದರೂ ಹಾಳಾಗಿದ್ದ ಉಪ್ಪಿನಕಾಯಿ ವಾಪಸ್ಸು ಬರುವುದೇ??ಕಡೆಗೆ ಅದನ್ನು ನೀರಿನಲ್ಲಿ ಸುರಿದು ಮಿಡಿಗಳನ್ನು ಬೇರ್ಪಡಿಸುವ ಪ್ರಯತ್ನವಾದರೂ ಅದು ಅಷ್ಟು ಯಶಸ್ವಿಯಾಗದೇ,ಅದನ್ನು ತೆಂಗಿನ ಮರದ ಬುಡಕ್ಕೆ ಹಾಕುವಾಗ ಆಕೆಗೆ ಹೇಳತೀರದ ಸಂಕಟ.ಉಪ್ಪಿನಕಾಯಿ ತೆಗೆಯಲು ಬಳಸುವ ಸೌಟನ್ನು ಸಹ ನೀರ ಪಸೆ ಆರಬೇಕೆಂದು ಬಿಸಿ ಮಾಡಲಾಗುತ್ತದೆ.ಹಾಗಾಗಿಯೇ ಉಪ್ಪಿನಕಾಯಿಗೆ ಬಾಣಂತಿಯಷ್ಟೇ ಆರೈಕೆ.ಈಗಲೂ ಜ್ವರ ಬಂದಾಗ ಗಂಜಿಯೊಡನೆ,ಅಜ್ಜಿ ಮಾಡಿದ ಅಪ್ಪೆ ಮಿಡಿ ಉಪ್ಪಿನಕಾಯಿ ಇದ್ದರೆ ನಾಲಗೆ ಕಹಿಯಲ್ಲಿಯೂ ಊಟ ಸೇರುತ್ತದೆ.ಈಗಲೂ ಅಪ್ಪೆ ಮಿಡಿಯ ಹೆಸರು ಕಿವಿಗೆ ಬಿದ್ದಾಗಲೆಲ್ಲಾ, ಮನಸ್ಸು ಬಾಲ್ಯದ ಬೇಸಿಗೆಯ ದಿನಗಳನ್ನು ನೆನೆದು ಪ್ರಪುಲ್ಲವಾಗುವುದು.

Sunday 8 January 2017

ಸೋಗು

ಸೋಗು
ಭಾನುವಾರದ ಮುಂಜಾನೆಯಲ್ಲಿ ಮನೆಯ ಮುಂದಿದ್ದ ಉದ್ಯಾನದಲ್ಲಿ,ಉಯ್ಯಾಲೆಯಲ್ಲಿ ತೂಗುತ್ತಾ,ಕಾಫಿ ಹೀರುತ್ತಾ ಕುಳಿತಿದ್ದ ಭಾಸ್ಕರ,ಅದಾಗ ತಾನೇ ಮಾಲಿ ತಂದುಕೊಟ್ಟಿದ್ದ ಇಂಗ್ಲೀಷ್ ಪೇಪರ್‍ನ ಮೇಲೆ ಕಣ್ಣಾಡಿಸುತ್ತಿದ್ದ.ದಿನಕ್ಕೆ ಸರಿಸುಮಾರು ಹದಿನಾಲ್ಕು ಗಂಟೆ ದುಡಿಯುವ ಭಾಸ್ಕರನಿಗೆ ಭಾನುವಾರ ಮಾತ್ರವೇ ಬಿಡುವಿನ ದಿನ.ಅದಾಗಲೇ ಆತ ಪ್ರಾರಂಭಿಸಿದ್ದ ಒಂದು ಕಂಪನಿಯನ್ನು ಬಹುರಾಷ್ಟ್ರೀಯ ಕಂಪನಿಯೊಂದು ಭಾರಿ ಮೊತ್ತಕ್ಕೆ ಖರೀದಿಸಿತ್ತು.ವಾರದ ಎಲ್ಲಾ ದಣಿವನ್ನು ಆರಿಸುವ ರೀತಿಯಲ್ಲಿ ಆ ಉದ್ಯಾನದಲ್ಲಿ ಗಾಳಿ ಬೀಸುತ್ತಿತ್ತು.ಚಿಲಿಪಿಲಿ ಎನ್ನುತ್ತಿದ್ದ ಹಕ್ಕಿಗಳ ಸದ್ದು ಮನಸ್ಸಿನ ಸಂಭ್ರಮಕ್ಕೆ ಇನ್ನಷ್ಟು ಇಂಬು ನೀಡುತ್ತಿತ್ತು.
"ಭಾಸ್ಕರ...." ಮೃದುವಾದ ಪ್ರೀತಿಯ ದನಿಯೊಂದು ಭಾಸ್ಕರನನ್ನು ತಾನಿದ್ದ ಪ್ರಪಂಚದಿಂದ ಎಚ್ಚರಿಸಿತು.
"ಓ...ಅಪ್ಪಾ...ಬನ್ನಿ ಕೂತುಕೊಳ್ಳಿ..." ಎಂದು ತಾನು ಕುಳಿತಿದ್ದ ಉಯ್ಯಾಲೆಯಲ್ಲಿಯೇ ಅಪ್ಪನಿಗೊಂದು ಜಾಗ ಮಾಡಿಕೊಟ್ಟ ಭಾಸ್ಕರ.ರಾಯರು ಮಗನ ಪಕ್ಕದಲ್ಲಿಯೇ ಕುಳಿತರು."ಕಾಫಿ ಕುಡಿದ್ರಾ ಅಪ್ಪಾ...." ಎಂದು ಭಾಸ್ಕರ ಅಪ್ಪನನ್ನು ವಿಚಾರಿಸಿದನು.ರಾಯರು "ಆಗಲೇ ಆಯ್ತು...ನಿಂಗೆ ಈಗ ಬೆಳಗಾಗಿದೆ...ನನಗೆ ಸೂರ್ಯ ಹುಟ್ಟುವುದಕ್ಕೂ ಮುಂಚೆಯೇ ಎಚ್ಚರವಾಗುತ್ತೆ.." ಎಂದು ತಮ್ಮ ಮುಪ್ಪಿನ ಸಮಸ್ಯೆಯನ್ನು ಹೇಳಿ ನಕ್ಕರು ರಾಯರು."ಇನ್ನು ನಿದ್ದೆ ಸಮಸ್ಯೆ ಸರಿ ಆಗಿಲ್ವಾ...?ತಡಿ ಈಗಲೇ ಡಾಕ್ಟರ್‍ಗೆ ಪೋನ್ ಮಾಡ್ತೀನಿ" ಎನ್ನುತ್ತಾ ತನ್ನ ಪೋನ್ ತೆಗೆದನು ಭಾಸ್ಕರ."ಬೇಡ ಪುಟ್ಟಾ....ನಂಗೇನು ನಲವತ್ತು-ಐವತ್ತು ವರ್ಷವೇ ಡಾಕ್ಟರ್ ಹತ್ರ ಹೋಗಕ್ಕೆ?ನಂಗೂ ವಯಸ್ಸಾಯ್ತು...ಎಪ್ಪತ್ತು ದಾಟಿದೆ....ಬದುಕಿನ ಎಲ್ಲಾ ಆಸೆಗಳನ್ನು ಮಗನಾಗಿ ನೀನು ಪೂರೈಸಿದ್ದಿ.ಇನ್ನು ಬದುಕುವ ಆಸೆ ಇಲ್ಲಾ ನಂಗೆ...." ಎನ್ನುತ್ತಿದ್ದಂತೆ "ಯಾಕಪ್ಪಾ ಹಾಗೆಲ್ಲಾ ಮಾತಾಡ್ತೀಯಾ..??ನೀನು ಇನ್ನು ಒಂದಷ್ಟು ಕಾಲ ನನ್ನ ಜೊತೆಗೆ ಇರಬೇಕು..." ಎಂದಾಗ ಮಗನ ಪ್ರೀತಿಗೆ ಕಟ್ಟುಬಿದ್ದು ರಾಯರು ಮಾತು ಮುಂದುವರಿಸಲಿಲ್ಲ.
"ಮತ್ತೆ ಏನಪ್ಪಾ ಸಮಾಚಾರ??" ಭಾಸ್ಕರ ಅಪ್ಪನನ್ನು ಪ್ರಶ್ನಿಸಿದ.ಒಂದೇ ಮನೆಯಲ್ಲಿ ಇದ್ದರೂ,ಅಪ್ಪ ಮಗ ಜೊತೆಗೆ ಕುಳಿತು ಮಾತನಾಡಲು ವಾರದ ಆರು ದಿನಗಳು ಕಷ್ಟ.ಆದರೆ ಭಾನುವಾರ ಮಾತ್ರ ತಂದೆ-ಮಗ ಒಂದಿಷ್ಟು ಹರಟುತ್ತಿದ್ದರು.ಇದನ್ನು ಕಂಡು ರಾಯರ ಹೆಂಡತಿ ಸೊಸೆಯನ್ನು ಕುರಿತು "ಶುರುವಾಯ್ತು ನಿನ್ನ ಗಂಡಂದು,ನನ್ನ ಗಂಡಂದು ಮೀಟಿಂಗ್..." ಎಂದು ನಗುತ್ತಿದ್ದರು.
ತಾನು ತಂದಿದ್ದ ದಿನಪತ್ರಿಕೆಯ ಒಳಗಿನಿಂದ ಅಹ್ವಾನ ಪತ್ರಿಕೆಯೊಂದನ್ನು ತಗೆದು ರಾಯರು ತಮ್ಮ ಮುದ್ದಿನ ಮಗನ ಮುಂದಿಟ್ಟರು.ತುಂಬಾ ಐಷಾರಾಮಿ ಎಂಬಂತೆ ಇದ್ದ ಆ ವಿವಾಹಪತ್ರಿಕೆಯ ವಿನ್ಯಾಸ ಆಕರ್ಷಕವಾಗಿತ್ತು."ಭಾಸ್ಕರ....",ರಾಯರು ಮಾತು ಪ್ರಾರಂಭಿಸುತ್ತಿದ್ದಂತೆ,ತನ್ನ ಕಾಪಿ ಕಪ್‍ಅನ್ನು ಟೇಬಲ್ ಮೇಲೆ ಇಡುತ್ತಿದ್ದ ಭಾಸ್ಕರನ ಕಣ್ಣು ರಾಯರು ಇಟ್ಟಿದ್ದ ಆ ಪತ್ರಿಕೆಯ ಮೇಲೆ ಬಿದ್ದಿತು.ವಿಖ್ಯಾತ ವ್ಯಕ್ತಿಯಾಗಿದ್ದ ಆತನಿಗೆ ದಿನಕ್ಕೆ ಏನಿಲ್ಲವೆಂದರೂ ಮೂರರಿಂದ ನಾಲ್ಕು ಪತ್ರಿಕೆಗಳಂತೂ ಬಂದೇ ಬರುತಿತ್ತು.ಆದರೆ ಆತ ಕೆಲವನ್ನು ಮಾತ್ರ ನೋಡುತ್ತಿದ್ದ.ಕಣ್ಣ ಮುಂದೆ ಸುಂದರವಾಗಿ ಕಾಣುತ್ತಿದ್ದ ಆ ಪತ್ರಿಕೆಯನ್ನು ಕೈಗೆತ್ತಿಕೊಂಡ ಆತನಿಗೆ ವಿಷಯ ತಿಳಿಸಲು ಇದೇ ಸರಿಯಾದ ಸಮಯ ಎಂದುಕೊಂಡ ರಾಯರು "ನಿನ್ನ ಚಿಕ್ಕಪ್ಪನೇ ಬಂದು ಕೊಟ್ಟು ಹೋದ್ರು....ಜೊತೆಗೆ ಸ್ತುತಿ ಕೂಡ ಬಂದಿದ್ದಳು....ಅಷ್ಟೇ ಅಲ್ಲ ನಿನ್ನ ಚಿಕ್ಕಮ್ಮ ಕೂಡ ಬಂದ್ದಿದ್ದರು...ಸುಮನ್ ಕೂಡಾ ಬಂದಿದ್ದ..".ಇಷ್ಟು ಹೊತ್ತು ಆ ಪತ್ರಿಕೆ ನೋಡಲು ಭಾಸ್ಕರನಿಗೆ ಇದ್ದ ಕುತೂಹಲ ಅಪ್ಪನ ಮಾತುಗಳು ಕೇಳಿದ ನಂತರ ಇಲ್ಲವಾಯಿತು.ಅದನ್ನು ಸಂಪೂರ್ಣವಾಗಿ ನೋಡುವ ಮನಸ್ಸಿಲ್ಲದೆ,ಹಾಗೆಯೇ ಇಟ್ಟುಬಿಟ್ಟ.
ಮಗನ ಮನಸ್ಸನ್ನು ಚೆನ್ನಾಗಿಯೇ ತಿಳಿದಿದ್ದ ರಾಯರು ಮಾತು ಮುಂದುವರೆಸಿದರು "ಭಾನುವಾರ ಧಾರೆ...ಒಂದು ವಾರದ ಮುಂಚೆನೇ ಬರೋದಕ್ಕೆ ಹೇಳಿದ..ನಂಗೆ ಒಂದು ಒಳ್ಳೆ ರೇಷ್ಮೆ ಪಂಚೆ-ಷರ್ಟ್,ನಿನ್ನ ಅಮ್ಮನಿಗೆ ಮತ್ತೆ ಲಾವಣ್ಯನಿಗೆ ಸೀರೆ,ಜೊತೆಗೆ ನಿಂಗೆ ಒಂದು ಸೂಟ್ ಕೊಟ್ಟು ಹೋಗಿದ್ದಾರೆ...ಒಂದೆರಡು ದಿನ ಬಿಡುವು ಮಾಡ್ಕೋ..ಎಲ್ಲರೂ ಹೋಗಿ ಬರೋಣ.ಮತ್ತೆ........" ರಾಯರು ಮಾತು ಮುಗಿಸುವ ಮುನ್ನವೇ ಭಾಸ್ಕರ "ನಾನು ಬರಲ್ಲ..." ತನ್ನ ನಿರ್ಧಾರವನ್ನು ಗಟ್ಟಿಯಾಗಿಯೇ ಹೇಳಿದ."ಚಿಕ್ಕಪ್ಪ ಸಂಬಂಧಕ್ಕೆ ಬೆಲೆ ಕೊಡ್ತಾ ಇಲ್ಲ...ಬದಲಿಗೆ ಸವಲತ್ತುಗಳಿಗೆ ಬೆಲೆ ಕೊಡ್ತಾ ಇದ್ದಾರೆ...ನಾನು ಬರಲ್ಲ ಅಷ್ಟೇ...." ಎಂದು ಮತ್ತೊಮ್ಮೆ ತನ್ನ ನಿರ್ಧಾರವನ್ನು ಗಟ್ಟಿಯಾಗಿಯೇ ಹೇಳಿದನು ಭಾಸ್ಕರ.
"ಪುಟ್ಟ..ಹಾಗೆಲ್ಲ ಅನ್ನಬಾರ್ದು....ಇದು ನಿನ್ನ ತಂಗಿಯ ಮದುವೆ....ಜೊತೆಗೆ ನಮ್ಮ ಕುಟುಂಬದ ಕೊನೆಯ ಮದುವೆ....ನೀನು ಅವಳಗೆ ಅಣ್ಣ..ಮದುವೆಯಲ್ಲಿ ಓಡಾಡಬೇಕು...ಅದು ಅಲ್ಲದೇ ಕುಟುಂಬ ಸಮೇತ ಬಂದು ಹೇಳಿ ಹೋಗಿದ್ದಾರೆ...ಹೋಗದೆ ಇದ್ದರೆ ಚೆನ್ನಾಗಿರುತ್ತಾ...?ಅದೂ ಅಲ್ಲದೇ ನಿನ್ನ ಚಿಕ್ಕಪ್ಪ ಈಗ ಮೊದಲಿನ ಹಾಗೇ ಇಲ್ಲ...ಬದಲಾಗಿದ್ದಾನೆ...ನಾನು ಅಂದ್ರೆ ಎಷ್ಟು ಪ್ರೀತಿ ಗೊತ್ತಾ ಅವನಿಗೆ..." ಮತ್ತೊಮ್ಮೆ ರಾಯರು ಮಾತು ಮುಗಿಸುವ ಮುನ್ನ ಭಾಸ್ಕರ "ಸಂಬಂಧಗಳಿಗಲ್ಲ ಬೆಲೆ..ಸವಲತ್ತುಗಳಿಗೆ...ಬಾಂಧವ್ಯಕ್ಕೆ ಅಲ್ಲ ಬೆಲೆ ಬದುಕಿನ ರೀತಿಗೆ...ಹತ್ತು ವರ್ಷಗಳಲ್ಲಿ ಎಷ್ಟು ಬದಲಾವಣೆ ಅಲ್ವ ಅಪ್ಪ...ನಾವು ಅವರ ಬಂಧುಗಳು ಆಗಿದ್ದೇ ಅವಮಾನ ಅಂದುಕೊಂಡವರು,ನಾವು ಅವರ ಮನೆಯ ವಿಶೇಷಗಳಿಗೆ ಬರಬಾರದು ಅಂತ ಅಂದುಕೊಳ್ತಾ ಇದ್ದವರು..ಇವತ್ತು ನಾವು ಬರಲೇಬೇಕು ಅಂತಿದ್ದಾರೆ...ನಿನ್ನ ಹೆಸರು ಹಾಕಿಸಿದ್ದಾರೆ ಪತ್ರಿಕೆಯಲ್ಲಿ..." ಎಂದು ನಗೆಯೊಂದನ್ನು ಬೀರಿದನು ಭಾಸ್ಕರ.
"ನಾನು ಬರಲ್ಲ...ನೀನು,ಅಮ್ಮ ಹೋಗಿ ಬನ್ನಿ...ಬೇಕಿದ್ರೆ ಲಾವಣ್ಯನ್ನು ಕರ್ಕೊಂಡು ಹೋಗಿ...ಬೇರೆ ಯಾರ ಮನೆಯ ವಿಶೇಷಕ್ಕೆ ಆದರೂ ಬರ್ತಿದ್ದೆ...ಆದ್ರೆ ಇದಕ್ಕೆ ಮಾತ್ರ ಒತ್ತಾಯ ಮಾಡಬೇಡಿ..ಪ್ಲೀಸ್.." ಎಂದು ಕೈಮುಗಿದನು ಭಾಸ್ಕರ.ಇನ್ನು ಮಾತನಾಡಿ ಮಗನ ಮನಸ್ಥಿತಿಯನ್ನು ಹಾಳು ಮಾಡುವುದು ಬೇಡ ಎಂದುಕೊಂಡ ರಾಯರು "ಪುಟ್ಟ..ನೀನು ಬರದಿದ್ರೆ ಅವನಿಗೆ ಬೇಜಾರು ಆಗುತ್ತೋ ಇಲ್ಲವೋ...ಆದರೆ ನನಗಂತೂ ಬೇಜಾರಾಗುತ್ತೆ.." ಎಂದು ಮೃದುವಾಗಿಯೇ ತಮ್ಮ ಮನದ ಆಸೆಯನ್ನು ಮಗನ ಮುಂದಿಟ್ಟು ಅಲ್ಲಿಂದ ಹೊರಟರು ರಾಯರು.
ತಾನು ಅರ್ಧ ಮುಗಿಸಿದ್ದ ಓದನ್ನು ಮುಂದುವರೆಸಲು ದಿನಪತ್ರಿಕೆಯನ್ನು ಕೈಗೆತ್ತಿಕೊಂಡನು ಭಾಸ್ಕರ.ಆದರೂ ಅದೇಕೋ ತನ್ನ ಚಿಕ್ಕಪ್ಪನ ಮಗಳ ಮದುವೆಯ ಆಹ್ವಾನ ಪತ್ರಿಕೆಯನ್ನು ಮತ್ತೊಮ್ಮೆ ನೋಡಬೇಕೆನಿಸಿತು.ತೆಗೆದು ನೋಡುತ್ತಿದ್ದಂತೆ "ಶ್ರೀಮತಿ ಮತ್ತು ಶ್ರೀಅನಂತ ರಾವ್ ಮಾಡುವ ವಿಜ್ಞಾಪನೆಗಳು" ಎಂದು ತನ್ನ ತಂದೆಯ ಹೆಸರನ್ನು ಕಂಡನು.ಮತ್ತೆ ಮತ್ತೆ ಅದನ್ನೇ ನೋಡಿದ ಭಾಸ್ಕರನ ಮನಸ್ಸು ಹಳೆಯದನ್ನು ನೆನಪಿಸಿಕೊಳ್ಳುವಂತೆ ಮಾಡಿತು.
    ***************************************************************
ಅದಾಗ ತಾನೇ ಭಾಸ್ಕರ ಪಿಯುಸಿ ಮುಗಿಸಿದ್ದ.ಅನಂತ ರಾಯರಿಗೆ ಹೇಳಿಕ್ಕೊಳ್ಳುವಷ್ಟು ಆದಾಯವಿರಲಿಲ್ಲ.ಕೊಡಿಟ್ಟ ಹಣವೆಲ್ಲ ಮಗಳ ಮದುವೆಗೆ ಖರ್ಚಾಗಿ ಹೋಗಿತ್ತು.ಹಾಗಾಗಿ ಇದ್ದುದ್ದರಲ್ಲಿಯೇ ಜೀವನ ತೂಗಿಸುವುದು ಅನಿವಾರ್ಯವಾಗಿತ್ತು.ಒಂದಿಷ್ಟು ವ್ಯವಹಾರಗಳಿಗೆ ಕೈಹಾಕಿ ಇದ್ದುದನ್ನೆಲ್ಲಾ ಕಳೆದುಕೊಂಡಿದ್ದರು ರಾಯರು.ಇದ್ದ ಒಬ್ಬ ತಮ್ಮನಿಗೆ ಶ್ರೀಮಂತಿಕೆ ಇದ್ದುದ್ದರಿಂದ ಆತನಿಗೆ ಅಣ್ಣನನ್ನು ಕಂಡರೆ ಅಷ್ಟಕಷ್ಟೆ.ರಾಯರು ಆ ಬಗ್ಗೆ ತಲೆ ಕೆಡಿಸಿಕ್ಕೊಳ್ಳುತ್ತಿರಲಿಲ್ಲ.
ಒಂದು ದಿನ ರಾಯರ ಮನೆಗೆ ಆಮಂತ್ರಣ ಪತ್ರಿಕೆಯೊಂದು ಬಂದಿತು.ತನ್ನ ತಮ್ಮನ ಮನೆ ಗೃಹಪ್ರವೇಶದ ಆಹ್ವಾನ ಪತ್ರಿಕೆ ಅದಾಗಿತ್ತು.ಸ್ವಂತ ಅಣ್ಣನನ್ನು ಕರೆಯುವಷ್ಟು ಸೌಜನ್ಯವೂ ಇಲ್ಲದೆ ಬರೀ ಕಾಗದವನ್ನಷ್ಟೇ ಕಳುಹಿಸಿದ್ದ.ಅಲ್ಲದೇ ತಾನು ಮನೆ ಕಟ್ಟಿಸಿರುವ ವಿಷಯವನ್ನೂ ಕೂಡ ತಿಳಿಸಿರಲಿಲ್ಲ.ಆದರೂ ರಾಯರು ತಮ್ಮ ಹೆಂಡತಿಯ ವಿರೋಧದ ನಡುವೆಯೂ ಮಡದಿ-ಮಗನನ್ನು ಕರೆದುಕೊಂಡು ಹೊರಟರು.
ತನ್ನ ಅಂತಸ್ತಿಗೆ ತಕ್ಕವರನ್ನೆಲ್ಲಾ ಕರೆದಿದ್ದ ರಾಯರ ತಮ್ಮನ ಮನೆ ಭವ್ಯ ಬಂಗಲೆಯಂತ್ತಿತ್ತು.ವಿಶಾಲವಾದ ಸೈಟಿನಲ್ಲಿ ಆ ದಿನ ಅದೆಷ್ಟು ಐಷಾರಾಮಿ ಕಾರುಗಳು ನಿಂತಿದ್ದವೋ ಗೊತ್ತಿಲ್ಲ.ಅಲ್ಲಿಗೆ ಬಂದವರ ವೇಷಭೂಷಣಗಳೂ ಸಹ ಅವರೆಲ್ಲರೂ ಸಿರಿವಂತರು ಎಂಬುದನ್ನು ನಿರೂಪಿಸುತ್ತಿತ್ತು.ರಾಯರ ಅಂತಸ್ತು ಯಾವ ರೀತಿಯಿಂದ ನೋಡಿದರೂ ಅಲ್ಲಿಗೆ ಬಂದವರ ಕಾಲು ಭಾಗದಷ್ಟೂ ಇರಲಿಲ್ಲ.ಬಹುಶಃ ರಾಯರ ಆಗಮನವನ್ನು ಆವರ ತಮ್ಮ ನಿರೀಕ್ಷಿಸಿರಲಿಲ್ಲವೆಂದು ಕಾಣುತ್ತದೆ.ಬಂದ ಶ್ರೀಮಂತರಿಗೆಲ್ಲಾ ಸ್ವಾಗತ ಕೋರುತ್ತಿದ್ದ ಆತ,ಕುಟುಂಬ ಸಮೇತ ಬಂದಿದ್ದ ರಾಯರನ್ನು ಗಮನಿಸದಂತೆ ಮಾಡಿದ.ಇಡೀ ಗೃಹಪ್ರವೇಶದ ಔತಣಕೂಟ ಮುಗಿದರೂ,ಸೌಜನ್ಯಕ್ಕೂ ಒಂದೆರಡು ಮಾತುಗಳನ್ನು ಆಡಲಿಲ್ಲ ಆತ.ಆತನ ಹೆಂಡತಿಯಂತೂ ಕತ್ತೆತ್ತಿ ಇವರೆಡೆಗೆ ನೋಡಲೂ ಇಲ್ಲ.ಅಷ್ಟೇ ಅಲ್ಲದೆ ಅಲ್ಲಿ ನೆರೆದಿದ್ದ ಕೆಲವು ಬಂಧುಗಳೆನಿಸಿಕೊಂಡವರೂ ಕೂಡ ತಮ್ಮ ಅಂತಸ್ತಿಗೆ ತಕ್ಕವರೊಡನೆ ಮಾತುಕತೆಯಲ್ಲಿ ನಿರತರಾಗಿದ್ದರು.ಇದೆಲ್ಲವನ್ನೂ ನೋಡಿದ ರಾಯರಿಗೆ ಬಂದದ್ದೇ ತಪ್ಪು ಎನ್ನಿಸಿಬಿಟ್ಟಿತು.ಊಟವನ್ನೂ ಸರಿಯಾಗಿ ಮಾಡಲಾಗಲಿಲ್ಲ.ರಾಯರ ಹೆಂಡತಿಯಂತೂ,ದಾರಿಯುದ್ದಕ್ಕೂ ಬೈದುಕೊಂಡೇ ಬಂದರು.ಅಂದೇ ಕೊನೆ ರಾಯರು ತಮ್ಮ ಕುಟುಂಬದವರ ಯಾವ ವಿಶೇಷ ಸಮಾರಂಭಕ್ಕೂ ಹೋಗುತ್ತಿರಲಿಲ್ಲ.
          ********************************************************
ಹಳೆಯ ನೆನಪು ಮತ್ತೆ ಭಾಸ್ಕರನ ಮುಖದ ಮಂದಸ್ಮಿತಕ್ಕೆ ಕಾರಣವಾಯಿತು.ಯಾವ ಬಳಗ ತಮ್ಮ ಇರುವಿಕೆಯನ್ನು ಅವಮಾನ ಎಂದು ಭಾವಿಸುತ್ತಿದ್ದರೋ,ಅವರೇ ಈ ದಿನ ಕುಟುಂಬ ಸಮೇತ ಬಂದು ಆಹ್ವಾನ ಕೊಡುತ್ತಿದ್ದಾರೆ.ಅಷ್ಟಕ್ಕೂ ಬದಲಾಗಿರುವುದು ಏನು? ಎಂಬ ಆಲೋಚನೆ ಆತನಲ್ಲಿ ಬಂದಿತು.ಮುಂಚೆ ಆಟೋಗಳಲ್ಲಿ,ಬಸ್ಸುಗಳಲ್ಲಿ ಹೋಗುತ್ತಿದ್ದವರು ಇಂದು ಐಷಾರಾಮಿ ಕಾರಿನಲ್ಲಿ ಪಯಣಿಸುತ್ತಿದ್ದರು.ಹಂಚಿನ ಮನೆಯ ಜಾಗದಲ್ಲಿ ಅರಮನೆಯಂತ ಮಹಲು ಬಂದಿದೆ.ಬಯಕೆಗಳಿಗೆ ಕಡಿವಾಣ ಹಾಕುವ ಅವಶ್ಯಕತೆಯಿಲ್ಲ.ಬಯಸಿದ್ದನ್ನೆಲ್ಲಾ ಕೊಳ್ಳುವಷ್ಟು ಕಾಸಿದೆ.ಈ ಬದಲಾವಣೆಯೇ ತನ್ನ ಚಿಕ್ಕಪ್ಪನಲ್ಲಿಯೂ ತಮ್ಮ ಮೇಲಿನ ಪ್ರೀತಿಗೆ ಕಾರಣವಾಗಿರಬಹುದು ಎಂದುಕೊಂಡು ಮತ್ತೊಮ್ಮೆ ನಕ್ಕನು ಭಾಸ್ಕರ."ಸಂಬಂಧಗಳಿಗಲ್ಲ ಬೆಲೆ...ಸವಲತ್ತುಗಳಿಗೆ..ಬರೀ ಸೋಗು.." ಮನಸ್ಸೊಳಗಿನ ಈ ಮಾತು ಮತ್ತೆ ಆತನ ನಗುವಿಗೆ ಕಾರಣವಾಯಿತು.
ರಾತ್ರಿ ಸುಮಾರು ಹತ್ತು ಗಂಟೆಯ ಸಮಯ.ಸೋಫಾದ ಮೇಲೆ ತನ್ನ ಲ್ಯಾಪ್‍ಟಾಪ್‍ನೊಂದಿಗೆ ತಲ್ಲೀನನಾಗಿದ್ದ ಭಾಸ್ಕರನ ಬಳಿ ರಾಯರು ಬಂದು "ಭಾಸ್ಕರ..." ಎಂದು ಕರೆದರು."ಅಪ್ಪಾ.." ಎಂದುಕೊಂಡು ಭಾಸ್ಕರ ತನ್ನ ಲ್ಯಾಪ್‍ಟಾಪ್‍ಅನ್ನು ಪಕ್ಕಕ್ಕೆ ಇಟ್ಟು ಮಾತಿಗೆ ಕುಳಿತನು.
"ಏನಪ್ಪಾ..?" ಎನ್ನುತ್ತಿದ್ದಂತೆ ರಾಯರು "ಏನಿಲ್ಲ ಪುಟ್ಟ...ನಾನೊಂದು ಮಾತು ಹೇಳಬೇಕಿತ್ತು..ನೀನು ಬೇಜಾರು ಮಾಡಿಕೊಳ್ಳಬಾರದು...." ಎನ್ನುತ್ತಿದ್ದಂತೆ ರಾಯರು ಯಾವ ವಿಷಯದ ಬಗ್ಗೆ ಮಾತನಾಡಲು ಬಂದಿದ್ದರು ಎಂಬ ಅರಿವಿತ್ತು.ಆದರೂ ತನ್ನ ತಂದೆಗೆ ಬೇಸರವಾಗಬಾರದೆಂಬ ಕಾರಣದಿದಂದ "ಹೇಳಪ್ಪಾ..." ಎಂದನು.
"ಮದುವೆಗೆ ನೀನು ಬರ್ತೀಯಾ ಅಲ್ವಾ....?!ಹಿಂದೆ ಆಗಿದ್ದೆಲ್ಲಾ ಮರೆತುಬಿಡೋಣ...ಎಷ್ಟೇ ಆಗಲಿ ನಾವೆಲ್ಲ ಒಂದೇ ಬಳ್ಳಿಯ ಹೂಗಳು..." ಎಂದರು.
"ಆ ಪರಿಜ್ಞಾನ ನಿನ್ನ ತಮ್ಮನಿಗೂ ಇರಬೇಕು ಅಲ್ಲವಾ ಅಪ್ಪ...!ನಿಂಗೆ ಯಾಕೆ ಅರ್ಥ ಆಗ್ತಾ ಇಲ್ಲ...ಅವರು ನಮ್ಮ ಶ್ರೀಮಂತಿಕೆಗೆ ಕೊಡುತ್ತಿರೋ ಬೆಲೆ ಇದು...ಈಗ ನಿನಗೂ ಸಮಾಜದಲ್ಲಿ ಒಂದು ಸ್ಥಾನ ಇದೆ..ಹಾಗಾಗಿ ನೀನು ಅವರ ಅಂತಸ್ತಿಗೆ ಸರಿಸಮಾನ ಆಗಿದ್ದೀಯಾ ಅದಕ್ಕೆ ನಿನ್ನನ್ನು ಮದುವೆಗೆ ಕರೀತಾ ಇದ್ದಾರೆ...ಅದೇ ನೀನು ಬಡತನದಲ್ಲಿಯೇ ಇದ್ದಿದ್ದರೆ,ಖಂಡಿತವಾಗಲೂ ಅವರು ನಿಮ್ಮನ್ನ ಮದುವೆಗೆ ಕರೆಯುವ ಮನಸ್ಸು ಮಾಡ್ತಾ ಇರಲಿಲ್ಲ...ಬೆಲೆ ನಿಮಗಲ್ಲ...ವಸ್ತುಗಳಿಗೆ...ಬಿಡಿ ಆ ಬಗ್ಗೆ ಯಾಕೆ ಮಾತಾಡೋದು?....ನಾನು ಬರಲ್ಲ ಅಷ್ಟೇ..." ಮತ್ತೆ ತನ್ನ ನಿರ್ಧಾರವನ್ನು ಸ್ಪಷ್ಟವಾಗಿ ಹೇಳಿದನು ಭಾಸ್ಕರ."ಪುಟ್ಟ...ನೀನು ಹೇಳಿದ್ದೆಲ್ಲ ನಿಜಾನೇ ಇರಬಹುದು...ಆದರೆ ಅದನ್ನೆಲ್ಲಾ ಆಲೋಚನೆ ಮಾಡುವ ಶಕ್ತಿ,ಆಸಕ್ತಿ ಎರಡೂ ನನಗಿಲ್ಲ..ಇರುವಷ್ಟು ದಿನ ಖುಷಿಯಾಗಿ ಇರಬೇಕು ಅಂತ ಆಸೆ...ಹಾಗಾಗಬೇಕು ಅಂತಾದರೆ ನೀನು ನನ್ನ ಜೊತೆ ಮದುವೆಗೆ ಬರಬೇಕು...ಒಂದು ದಿನ ರಜೆ ತೊಗೋ ಸಾಕು..." ಎಂದು ಮಗನ ಹೆಗಲನ್ನು ತಟ್ಟಿ ಅಲ್ಲಿಂದ ನಿರ್ಗಮಿಸಿದರು ರಾಯರು.
               **************************************************************
ಸುಮಾರು ವರ್ಷಗಳ ನಂತರ ತನ್ನ ಬಳಗದವರ ಸಂತೋಷಕೂಟವೊಂದರಲ್ಲಿ ಸೇರಿಕ್ಕೊಳ್ಳಲಿದ್ದಾನೆ ಭಾಸ್ಕರ.ಅರವತ್ತು ಲಕ್ಷದ ಕಾರಿನಲ್ಲಿ ತನ್ನ ತಂದೆ ತಾಯಿ ಹಾಗೂ ಮಡದಿಯೊಡನೆ ತನ್ನ ಚಿಕ್ಕಪ್ಪನ ಮಗಳ ಮದುವೆಗೆ ಹೋಗುತ್ತಿದ್ದ ಅವನ ಮನಸ್ಸು ಕೇವಲ ತನ್ನ ತಂದೆಯ ಸಂತೋಷಕ್ಕಾಗಿ ಮಾತ್ರ ಒಪ್ಪಿಕೊಂಡಿತ್ತು.ಹಲವು ಬಾರಿ ಹೋಗುವುದು ಬೇಡವೆಂದುಕೊಂಡಿದ್ದರೂ,ಕಡೆಯಲ್ಲಿ ಆತನಿಗೆ ಒಲ್ಲೆ ಎನ್ನಲಾಗಲಿಲ್ಲ.
ಅತಿ ದೊಡ್ಡ ಕಲ್ಯಾಣಮಂಟಪವೊಂದರಲ್ಲಿ ಮದುವೆ ಸಮಾರಂಭ ಏರ್ಪಟಾಗಿತ್ತು.ಕಾರಿನಿಂದ ರಾಯರು ಇಳಿಯುತ್ತಿದ್ದಂತೆ ರಾಯರ ತಮ್ಮ ಹಾಗೂ ಆತನ ಹೆಂಡತಿ ಇಬ್ಬರೂ ರಾಯರ ಕುಟುಂಬವನ್ನು ಸ್ವಾಗತಿಸಿದರು.ಕಾರಿನಲ್ಲಿ ಬಂದದ್ದಕ್ಕೆ ಈ ಯೋಗ ಇರಬಹುದು ಎಂದುಕೊಂಡು ಭಾಸ್ಕರ ಮನಸಿನೊಳಗೆ ನಕ್ಕನು.ತನ್ನ ಬೀಗರಿಗೆ ಹೆಮ್ಮೆಯಿಂದ ಅಣ್ಣನನ್ನು ಪರಿಚಯಿಸಿದ್ದ ರಾಯರ ತಮ್ಮ.
ಮದುವೆಯ ಸಮಾರಂಭದ ವ್ಯವಸ್ಥೆ ಅತ್ಯಂತ ವೈಭವಯುತವಾಗಿಯೇ ಏರ್ಪಾಡಾಗಿತ್ತು.ಒಂದಷ್ಟು ವರ್ಷದ ಕೆಳಗೆ ಯಾವ ಬಳಗದವರೂ ಮಾತನಾಡಲು ಇಷ್ಟ ಪಡದ ರಾಯರ ಸುತ್ತಲೂ ಅದೆಷ್ಟು ಜನ.ಅದೆಷ್ಟು ಹರಟೆ.ರಾಯರ ಪತ್ನಿಯು ಸಹ ಮಾತುಕತೆಯಲ್ಲಿ ನಿರತರಾಗಿದ್ದರು.ಇದನ್ನೆಲ್ಲ ನೋಡುತ್ತಿದ್ದ ಭಾಸ್ಕರನಿಗೆ ಮತ್ತೊಮ್ಮೆ ಇದೆಲ್ಲಾ ಸೋಗು ಎನಿಸತೊಡಗಿತು."ಸಂಬಂಧಗಳಿಗಲ್ಲ ಬೆಲೆ...ಸವಲತ್ತುಗಳಿಗೆ...." ಮತ್ತೊಮ್ಮೆ ಆತನ ಮನಸ್ಸು ನಕ್ಕಿತು.ತನ್ನ ಬಳಗದವರ ಮಧ್ಯದಿಂದ ರಾಯರು ಮಗನನ್ನೊಮ್ಮೆ ನೋಡಿದರು.ತಂದೆ-ಮಗ ಇಬ್ಬರೂ ನಕ್ಕರು.