ಘಟಪ್ರೇತ
"ಅಮ್ಮ ಹೊಟ್ಟೆ ಹಸೀತಿದೆ.....ಊಟ ಹಾಕು..." ಶಾಲೆಯಿಂದ ಬರುತ್ತಲೆ ಪುಟ್ಟ ತನ್ನ ಹರಿದ ಬ್ಯಾಗನ್ನು ನೆಲದ ಮೇಲೆ ಇಡುತ್ತಾ ಹೇಳಿದ.ವಾಸ್ತವವಾಗಿ ಅವನ ಹೆಸರು ಪುಟ್ಟ ಅಲ್ಲ.ತಂದೆ ಇಲ್ಲದ ಅವನಿಗೆ ತಾಯಿ ಇಟ್ಟ ಹೆಸರು ನಿಂಗ.ಆದರೆ ಶಾಲೆಗೆ ಸೇರುವಾಗ ಅಮ್ಮನೊಡನೆ ಹಠಮಾಡಿ ಹೆಸರು ಬದಲಾಯಿಸಿಕೊಂಡಿದ್ದ.ಅದಕ್ಕೂ ಒಂದು ಕಾರಣ ಇತ್ತು.ಅದೇನೆಂದರೆ ಆತನಿಗೆ ಅವನ ಅಮ್ಮ ಹೇಳುತ್ತಿದ್ದ ಬಹುತೇಕ ಕತೆಗಳಲ್ಲಿ ಪುಟ್ಟನೇ ನಾಯಕ.ಆದ್ದರಿಂದ ನಿಂಗನಿಗೆ ಪುಟ್ಟನೆಂದರೆ ಸೂಪರ್ಮ್ಯಾನ್,ಬ್ಯಾಟ್ಮ್ಯಾನ್ ತರಹದ ಹೀರೋ.
"ಯಾಕೋ ಬಿಸಿಯೂಟ ತಿನ್ನಲ್ಲಿಲ್ಲವೇನೋ ಇವತ್ತು.....ಆರು ಗಂಟೆಗೆ ಊಟ ಕೇಳುತ್ತಾ ಇದ್ದೀಯಾ....ಎಂಟು ಗಂಟೆಗೇ ಊಟ..." ಅಮ್ಮನ ಉತ್ತರ.ಅಮ್ಮನಿಗೇನೋ ಮಗನಿಗೆ ಊಟ ಹಾಕುವ ಮನಸ್ಸಿದೆ.ಆದರೆ ಮಗ ರಾತ್ರಿ ಎದ್ದು ಹಸಿವು ಎಂದರೆ ಕೊಡಲು ಏನೂ ಇಲ್ಲ.ಎರಡು ಹೊತ್ತಿನ ಊಟಕ್ಕೂ ಪರದಾಡುವ ಪರಿಸ್ಥಿತಿ."ಅಮ್ಮ...." ಎಂದು ಪುಟ್ಟ ಮತ್ತೊಮ್ಮೆ ಕೇಳಿದಾಗ ತಾಯಿಯ ಕರುಳು ಚುರ್ ಎಂದಿತು."ಸರಿ...ಏಳು ಗಂಟೆಗೆ ಹಾಕುತ್ತೇನೆ".ಪುಟ್ಟನ ಪುಟ್ಟ ಹೊಟ್ಟೆಯಲ್ಲಿ ದೊಡ್ಡ ಸದ್ದು.ಪುಟ್ಟನ ಗಮನವೆಲ್ಲಾ ಏಳು ಗಂಟೆಯ ಕಡೆಗೆ.
"ಅಮ್ಮ ಏಳು ಗಂಟೆ ಆಯ್ತು"ಪುಟ್ಟನ ಧ್ವನಿ."ತಟ್ಡೆ ಇಟ್ಟಿದ್ದೀನಿ..ಬಾ...." ಅಮ್ಮನ ಪ್ರತಿಧ್ವನಿ.ಸಮಯ ಏಳು ಆಗಿತ್ತೋ ಇಲ್ಲವೋ ಆದರೆ ಈ ಸಲ ಪುಟ್ಟನ ಕೂಗಿಗೆ ಅಮ್ಮನಿಗೆ ಇಲ್ಲವೆನ್ನಲಾಗಲ್ಲಿಲ್ಲ.
ತಾಯಿ ಇದ್ದ ಅನ್ನದಲ್ಲಿ ಸ್ವಲ್ಪವನ್ನು ಪುಟ್ಟನಿಗೆ ಹಾಕಿದಳು.ಹಸಿದ ಪುಟ್ಟನಿಗೆ ಅದು ಸಾಲಲಿಲ್ಲ."ಅಮ್ಮ..." ಎಂದು ರಾಗ ಎಳೆದನು.ತಾಯಿ ಇದ್ದ ಅನ್ನವನ್ನೆಲ್ಲ ಹಾಕಿದಳು.ಹಸಿದ ಪುಟ್ಟನಿಗೆ ಅದು ಸಾಲಲಿಲ್ಲ.ಮತ್ತೊಮ್ಮೆ ಕೇಳಿದಾಗ ತಾಯಿ "ಇವತ್ತು ಇಷ್ಟೇ....ಇನ್ನು ನಾಳೆ ರಾತ್ರಿನೇ ಊಟ..."
ಪುಟ್ಟನಿಗೆ ರೇಗಿತು "ಏನಮ್ಮಾ....ಹೊಟ್ಟೆ ತುಂಬಾ ಊಟನೂ ಇಲ್ಲವಾ...ಬೆಳಿಗ್ಗೆ ತಿಂಡಿಯಂತೂ ಇಲ್ಲ...ರಾತ್ರಿ ಊಟನೂ ಇಲ್ವಾ...??" ಎಂದು ಜೋರಾಗಿಯೇ ಕೂಗಿದ.ಅಮ್ಮನಿಗೆ ನೋವಾಯಿತು.ಹೌದು ಒಂದು ಹೊತ್ತಿನ ಊಟಕ್ಕೂ ಕಷ್ಟ ಇತ್ತು ಆ ಮನೆಯಲ್ಲಿ.
ಪುಟ್ಟನಿಗೆ ಒಂದು ವರ್ಷ ಇರುವಾಗ ಆತನ ತಂದೆ ಕಾಲವಾಗಿದ್ದ.ಮೊದಲೇ ಬಡತನ,ಜೊತೆಗೆ ಗಂಡನ ಸಾವು,ಕೈಯಲ್ಲಿ ಒಂದು ಕೂಸು.ಅದರೂ ಅಲ್ಲಿ ಇಲ್ಲಿ ಕೆಲಸ ಮಾಡಿ ಹೇಗೋ ತಾಯಿ-ಮಗ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದರು.ಆದರೆ ಇತ್ತೀಚೆಗೆ ಆಕೆಗೆ ಎಲ್ಲೂ ಕೆಲಸ ಇಲ್ಲ.ಇದನ್ನೆಲ್ಲಾ ಮಗನಿಗೆ ಹೇಳುವುದು ಹೇಗೆ?ಹೇಳಿದರೂ ಅವನಿಗೆ ಅರ್ಥ ಆಗುವುದು ಕಷ್ಟ.ಆದರೇ ಈಗ ಹೇಳಲೇ ಬೇಕು.ಏಕೆಂದರೆ ಪುಟ್ಟ ಉತ್ತರ ಕೇಳದೇ ಬಿಡುವವನಲ್ಲ.
"ಪುಟ್ಟ..ಇಲ್ಲಿ ನೋಡು..." ಎನ್ನುತ್ತಾ ಅನ್ನದ ಪಾತ್ರೆಯನ್ನು ಕೈಯಲ್ಲಿ ಹಿಡಿದು ಪುಟ್ಟನ ಕಡೆ ತೋರಿದಳು."ಇದರ ತುಂಬಾ ಅನ್ನ ಮಾಡಿದ್ದೆ...ಆದರೆ ಅದನ್ನು ಘಟಪ್ರೇತ ತಿಂದಿದೆ.ನಾನೇನು ಮಾಡಲಿ ಕಂದಾ..." ಪುಟ್ಟ ತನ್ನ ಬಟ್ಟಲು ಕಣ್ಣುಗಳನ್ನು ಅರಳಿಸಿ ಪಾತ್ರೆಯನ್ನು ನೋಡಿದ."
"ಯಾರಮ್ಮ ಅದು...!!" ಪುಟ್ಟನ ಪ್ರಶ್ನೆ.
"ಅದು ಒಂದು ದೆವ್ವ....ಈ ಪಾತ್ರೆಯಲ್ಲಿ ಬಂದು ಸೇರಿದೆ..ಅದಕ್ಕೆ ಸಿಟ್ಟು ಬಂದರೆ ನನ್ನನ್ನು ತಿಂದು ಬಿಡುತ್ತದೆ..." ವಿಧಿಯಿಲ್ಲದೆ ಸುಳ್ಳಿನ ಕಥೆ ಹೇಳುತ್ತಿದ್ದಾಳೆ ತಾಯಿ.
ದೆವ್ವ ಎಂದ ಕೂಡಲೇ ಪುಟ್ಟನಿಗೆ ಭಯವಾಯಿತು.ಅದರಲ್ಲೂ ಅದು ಅಮ್ಮನನ್ನು ತಿಂದು ಬಿಟ್ಟರೇ.ಅಯ್ಯೋ ಬೇಡಪ್ಪಾ ಎಂದುಕೊಂಡು ಅಮ್ಮನಿಗೆ ಹೇಳಿದ "ಅಮ್ಮ...ಆ ದೆವ್ವಕ್ಕೇ ಎಷ್ಟು ಬೇಕೋ ಅಷ್ಟು ತಿನ್ನಲಿ...ಉಳಿದದ್ದು ನಮಗೆ ಸಾಕು"
ತಾಯಿಗೆ ನೋವಾಯಿತು.ಆದರೂ ವಿಧಿ ಇಲ್ಲ.ಅಂದಿನಿಂದ ಪುಟ್ಟ ಶಾಲೆಯಿಂದ ಬಂದೊಡನೆ ಪಾತ್ರೆ ಇಣುಕಿ ನೋಡುತ್ತಿದ್ದ.ಘಟಪ್ರೇತಕ್ಕೆ ಶಾಪ ಹಾಕುತ್ತಿದ್ದ.ಹೀಗೆ ಕೆಲ ದಿನಗಳು ಕಳೆದವು.ಒಂದು ದಿನ ಪುಟ್ಟನ ಅಮ್ಮನಿಗೆ ಒಳ್ಳೆಯ ಸಂಬಳ ಸಿಕ್ಕಿತು.ಅಂದು ಆಕೆ ಮಗನಿಗೆ ಹೊಟ್ಟೆ ತುಂಬಾ ಊಟ ಹಾಕಲು ನಿರ್ಧರಿಸಿದಳು.
ಪುಟ್ಟ ಅಂದು ತಡವಾಗಿ ಬಂದ.ಬಂದವನೇ ಊಟಕ್ಕೆ ಕುಳಿತ.ಅಮ್ಮ ಊಟ ಹಾಕಿದಳು."ಅಮ್ಮ....ಕಿಚಡಿ....!!!" ಪುಟ್ಟನ ಸಂತೋಷಕ್ಕೇ ಪಾರವೇ ಇಲ್ಲ."ಹೌದು..ನಿಂಗಿಷ್ಟ ಅಲ್ವ...ಹೊಟ್ಟೆ ತುಂಬಾ ಊಟ ಮಾಡು...ಇವತ್ತು ಎಷ್ಟು ಬೇಕಾದರು ತಿನ್ನು..."ತಾಯಿ ಹೇಳಿದಳು,
ಪುಟ್ಟ ಪಾತ್ರೆಯನ್ನು ನೋಡಿದ.ಪಾತ್ರೆ ತುಂಬಾ ಕಿಚಡಿ ಇತ್ತು.ಪುಟ್ಟ ತನ್ನ ಮುಖ ಅರಳಿಸಿ "ಅಮ್ಮ....ಹಾಗದ್ರೆ ದೆವ್ವ ಹೋಯ್ತು...ಇನ್ನು ಮೇಲೆ ಹೊಟ್ಟೆ ತುಂಬಾ ಊಟ ಮಾಡಬಹುದು" ಎನ್ನುತ್ತಾ ತನ್ನ ತಟ್ಟೆಗೆ ಕೈ ಹಾಕಿ ಗಬಗಬನೆ ತಿನ್ನಲು ಪ್ರಾರಂಭಿಸಿದ.
ಪುಟ್ಟನ ಮಾತು ಕೇಳಿ ತಾಯಿಗೆ ಏನು ಹೇಳಬೇಕೋ ತಿಳಿಯಲಿಲ್ಲ ಏಕೆಂದರೆ ಆಕೆಗೆ ಇನ್ನು ಮುಂದೆ ಪ್ರತಿದಿನವು ಪುಟ್ಟನ ಹಸಿವು ತೀರಿಸುವ ನಂಬಿಕೆ ಇರಲಿಲ್ಲ.ಕಣ್ಣನ್ನು ಸೀಳಿಕೊಂಡು ಬಂದ ನೀರನ್ನು ತನ್ನ ಹರಿದ ಸೆರಗಿನ ತುದಿಯಿಂದ ಒರೆಸಿಕ್ಕೊಳ್ಳುತ್ತಾ ಮಗನ ತಲೆ ನೇವರಿಸಿದಳು.
Nice one bro...
ReplyDeleteNice one bro...
ReplyDeleteThank u Chinmaya....
DeleteTranslation please
ReplyDeleteSaanketika arthabaddha kruthi. Good one Raghu! Sahityalokadalli ninna e sanchaara, vihaara heege saagali.... All the best! :)
ReplyDeleteThank u so much Deepthi for your wishes...
DeleteSuper raghu keep blogging
ReplyDeleteSuper raghu keep blogging
ReplyDeleteAdbutha vaagi moodibandide :-)
ReplyDelete