Saturday 28 March 2015

ಪ್ರಣತಿ

ಪ್ರಣತಿ
ಎಲ್ಲಿ ನೋಡಿದರಲ್ಲಿ ಜನ.ಅವರಲ್ಲಿ ಅನೇಕರು ವಿದ್ಯಾರ್ಥಿಗಳು,ಇನ್ನು ಕೆಲವರು ಅವರ ಪೋಷಕರು,ಮತ್ತೆ ಕೆಲವರು ಶಿಕ್ಷಕರು,ವಿಶೇಷ ಅತಿಥಿಗಳಾಗಿ ಬಂದವರು ಸುಮಾರು ಜನ.ಅದು ಒಂದು ವಿಶ್ವವಿದ್ಯಾಲಯದ ಘಟಿಕೋತ್ಸವ ಸಮಾರಂಭ.ಅದೆಷ್ಟೋ ಪದವಿಧರರಿಗೆ ಪದವಿ ನೀಡುವ ಶುಭ ಘಳಿಗೆ ಅದಾಗಿತ್ತು.ಅದೆಷ್ಟೋ ತಂದೆ-ತಾಯಿಯರ ಕಣ್ಣುಗಳಲ್ಲಿ ತಮ್ಮ ಮಕ್ಕಳ ಮೂಲಕ ತಮ್ಮ ಕನಸುಗಳನ್ನು ಸಾಕಾರಗೊಳಿಸಿಕೊಂಡ ಆನಂದ ಕಾಣುತ್ತಿತ್ತು.
ಕಾರ್ಯಕ್ರಮ ಪ್ರಾರಂಭವಾಯಿತು.ಅಷ್ಟು ಹೊತ್ತು ಗಿಜುಗುಡುತ್ತಿದ್ದ ಸಭೆ ಸ್ವಲ್ಪ ಶಾಂತವಾಯಿತು.ಕಾರ್ಯಕ್ರಮ ನಿರೂಪಕರು ಅದೊಂದು ದಾಖಲೆಯ ಘಟಿಕೋತ್ಸವ ಏಕೆಂದರೆ ಒಬ್ಬ ವಿದ್ಯಾರ್ಥಿ 22 ಚಿನ್ನದ ಪದಕಗಳನ್ನು ಪಡೆದ್ದಿದ್ದಳು ಎಂದರು.ಈ ವಿಷಯ ಸಭೀಕರಲ್ಲಿ ಆಶ್ಚರ್ಯ ಮೂಡಿಸಿತು.ಅಕೆ ಯಾರು ಎಂದು ನೋಡುವ ತವಕ ಶುರುವಾಯಿತು.ಸಭೆ ಮತ್ತೆ ಧ್ವನಿಯೆದ್ದಿತು.ಆಕೆಯ ಹೆಸರನ್ನು ಘೋಷಿಸಲಾಯಿತು 
"ಸುಕೃತಿ ಆಚಾರ್ಯ.ವಿಶ್ವವಿದ್ಯಾಲಯದ ಇತಿಹಾಸದಲ್ಲಿಯೇ ದಾಖಲೆಯ ಪದಕಗಳನ್ನು ಪಡೆದ ಚಿನ್ನದ ಹುಡುಗಿ" ಎಂದು ಹೇಳುವಾಗಲೇ ಚಪ್ಪಾಳೆಯ ಸದ್ದು ಕಿವಿಗೆ ಬಡಿಯುತ್ತಿತ್ತು.ವೇದಿಕೆಯ ಕಡೆಗೆ ಸಭೀಕರೆಲ್ಲರ ಗಮನ.
ಕಾಲಿಲ್ಲದ ಯುವತಿಯೊಬ್ಬಳು ತನ್ನ ವೀಲ್‍ಚೇರ್‍ನ ಚಕ್ರಗಳನ್ನು ತಿರುಗಿಸುತ್ತ ವೇದಿಕೆಯ ಮಧ್ಯಭಾಗಕ್ಕೆ ಬಂದಳು.ಎಲ್ಲರಿಗೂ ಆಶ್ಚರ್ಯ.ಹೌದು 22 ಪದಕಗಳನ್ನು ಗೆದ್ದ ಸುಕೃತಿ ಕಾಲಿಲ್ಲದ ಹುಡುಗಿ.
ಸುಕೃತಿ ಹುಟ್ಟುತ್ತಲೇ ಕುಂಟಿ ಅಲ್ಲ.ಅವಳಿಗೆ ಸುಮಾರು ಆರು ವರ್ಷ ಇರುವಾಗ ಯಾವುದೋ ಜ್ವರ ಬಂದು ಕಾಲು ಮರಗಟ್ಟಿ ಹೋಗಿತ್ತು.ಆರ್ಯುವೇದ,ಹೋಮಿಯೋಪತಿ,ಅಲೋಪತಿ ಯಾವ ಚಿಕಿತ್ಸೆ ಮಾಡಿದರೂ ಫಲಕಾರಿ ಆಗಲ್ಲಿಲ್ಲ.ದೇವರಲ್ಲಿ ಹರಕೆ ಹೊತ್ತು ನೋಡಿದ್ದೂ ಆಯಿತು ಆದರೂ ಪ್ರಯೋಜನವಿಲ್ಲ.ಆಕೆಯ ಮನೆಯಲ್ಲಿ ಬಡತನ ಇರಲಿಲ್ಲ.ತಮ್ಮ ಆಸೆಗಳನ್ನು ಪೂರೈಸಿಕೊಳ್ಳಲು ಹವಣಿಸುವ ಸಾಮಾನ್ಯ ಮಧ್ಯಮ ವರ್ಗದ ಕುಟುಂಬ ಅವರದು.ಒಬ್ಬಳೇ ಮಗಳಿಗೆ ಒದಗಿದ ಪರಿಸ್ಥಿತಿ ತಂದೆ-ತಾಯಿಯರಿಗೆ ನುಂಗಲಾರದ ನೋವಾಗಿತ್ತು.ತನ್ನ ವಯಸ್ಸಿನವರಂತೆ ಆಡುತ್ತಾ,ಕುಣಿಯುತ್ತಾ ಇರಬೇಕಾದ ಮಗಳು ಕೂತಲ್ಲೆ ಕೂರಬೇಕಾದಾಗ ಅವರ ಬವಣೆ ಹೇಳತೀರದ್ದಾಗಿತ್ತು.
"ಕುಂಟಿಗೆ ಕರುಣೆ ಬೇಕು...ಅವಳ ಬದುಕು ಕಷ್ಟ...ಅವಳಿಗಷ್ಟೆ ಅಲ್ಲ ನಿಮಗೂ ಕಷ್ಟ..." ಎಂದು ಹಲವರು ಮಾತನಾಡಿದ್ದು ಕಿವಿಗೆ ಬಿದ್ದಾಗ ಸುಕೃತಿಗೆ ಬದುಕೇ ಬೇಡವೆನಿಸುತ್ತಿತ್ತು.ಆದರೂ ಏನಾದರೂ ಸಾಧಿಸಬೇಕೆಂದು ಪಣ ತೊಟ್ಟವಳು ಸುಕೃತಿ ಆಚಾರ್ಯ.ತನ್ನ ಜೀವನವನ್ನು ವಿದ್ಯೆ ಬೆಳಗುತ್ತದೆ ಎಂದು ಒದಲು ಮನಸ್ಸು ಮಾಡಿದ್ದಳು.ಅದಕ್ಕೆ ಬೆನ್ನೆಲುಬಾಗಿ ನಿಂತವರು ಆಕೆಯ ಪೋಷಕರು.
ಕೆಲವೊಮ್ಮೆ ಆಕೆಯ ಬಲಹೀನ ಕಾಲುಗಳು ವಿಪರೀತ ನೋವು ಕೊಡುತ್ತಿದ್ದವು.ಇದರಿಂದಾಗಿ ಅದೆಷ್ಟೋ ನೋವು ನಿವಾರಕ ಗುಳಿಗೆಗಳು ಆಕೆಯ ಹೊಟ್ಟೆ ಸೇರಿದ್ದವು.ಕೆಲವೊಮ್ಮೆ ಓದೇ ಬೇಡ ಕರುಣೆಯಲ್ಲಿಯೇ ಬದುಕುತ್ತೇನೆ ಎಂದು ಎಣಿಸಿದ್ದು ಉಂಟು ಅವಳಿಗೆ,ಆದರೂ  ಸಾಧಿಸುವ ಛಲ ಬಿಡಲಿಲ್ಲ.ಅವಳ ಆ ಎಲ್ಲ ನೋವಿನ ಫಲವೇ ಅಂದಿನ ಆ ಸಮಾರಂಭದಲ್ಲಿ ಆಕೆ ಗೆದ್ದ ಪದಕಗಳು.ಅಷ್ಟೆ ಅಲ್ಲ ಎಷ್ಟೋ ವಿದೇಶಿ ವಿಶ್ವವಿದ್ಯಾಲಯಗಳು ಅವಳನ್ನು ತಮ್ಮ ವಿದ್ಯಾರ್ಥಿಯನ್ನಾಗಿ ಮಾಡಿಕ್ಕೊಳ್ಳಲು ಸ್ಪರ್ಧೆಯಲ್ಲಿದ್ದವು.
ಮುಖ್ಯ ಅತಿಥಿಗಳು ಪದಕಗಳನ್ನು ನೀಡುವಾಗ ಬಹುತೇಕರು ಎದ್ದು ನಿಂತು ಆಕೆಯ ಛಲಕ್ಕೆ,ಆಕೆಗೆ ಸಲಾಂ ಹೇಳಿದ್ದರು.
"ವಿಕಲಚೇತನೆಯಾದರು ಸಾಧನೆ ಮಾಡಿದ ಸುಕೃತಿ ಆಚಾರ್ಯ ಈಗ ತಮ್ಮ ಅನಿಸಿಕೆಗಳನ್ನು ಹೇಳಲು ಕೇಳಿಕ್ಕೊಳ್ಳುತ್ತೇನೆ" ಕಾರ್ಯಕ್ರಮದ ನಿರೂಪಕರು ಕೇಳಿಕೊಂಡರು.ಮೈಕನ್ನು ಅವಳ ಸಮೀಪಕ್ಕೆ ಕೊಡಲಾಯಿತು.
  "ಎಲ್ಲರಿಗೂ ನಮಸ್ಕಾರ...ಇದು ನನ್ನೊಬ್ಬಳ ಸಾಧನೆ ಅಲ್ಲ..ಈ ಸಾಧನೆಯಲ್ಲಿ ನನ್ನ ತಂದೆ-ತಾಯಿಯ ಪಾಲೂ ಇದೆ...ಇದು ನಮ್ಮ ಮೂವರ ಸಾಧನೆ ಅಪ್ಪ-ಅಮ್ಮ ಇದರಲ್ಲಿ ನಿಮ್ಮ ಪಾಲೂ ಇದೆ" ಎಂದಾಗ ಆ ತಂದೆ ತಾಯಿಯರ ಕಣ್ಣುಗಳಲ್ಲಿ ಸಾರ್ಥಕ ಭಾವನೆ ಕಂಡಿತು. "ಎಲ್ಲರೂ ಹೇಳ್ತಾರೆ ನನ್ನ ತಂದೆ-ತಾಯಿ ನನ್ನಂತಹ ಮಗಳನ್ನು ಪಡೆಯಲು ಪುಣ್ಯ ಮಾಡಿದ್ದರು ಅಂತ..ಆದರೆ ಪುಣ್ಯವಂತೆ ನಾನು...ನನ್ನ ಅಪ್ಪ-ಅಮ್ಮ ಯಾವಾಗಲೂ ಹೇಳುತ್ತಾರೆ ನನ್ನ ಮಗಳು ವಿಕಲಚೇತನೆಯಲ್ಲ ವಿಶೇಷಚೈತನ್ಯದವಳು ಅಂತ...ಯಾರಿಗೆ ಸಿಗ್ತಾರೆ ಇಂತಹ ತಂದೆ-ತಾಯಿ" ಎಂದಾಗ ಮತ್ತೊಮ್ಮೆ ಜೋರಾದ ಚಪ್ಪಾಳೆ.ಆದರೆ ಈ ಬಾರಿ ಆಕೆಯ ಪೋಷಕರಿಗೆ.ಅಲ್ಲಿ ಕುಳಿತವರ ಕಣ್ಣಾಲಿಗಳು ಅದಾಗಲೇ ಒದ್ದೆಯಾಗಿದ್ದವು.
"ಕಡೆಯಲ್ಲಿ ಒಂದು ಮಾತು..."ಸುಕೃತಿ ಆಚಾರ್ಯ ಮತ್ತೆ ತನ್ನ ಮಾತು ಪ್ರಾರಂಭಿಸಿದಳು."ನನ್ನನ್ನು ವಿಕಲಚೇತನೆ ಅಂತ ಎಲ್ಲರೂ ಕರೀತಾರೆ...ಆದರೆ ಯಾರ ಚೇತನದಲ್ಲಿ ಬಲ ಇರುವುದಿಲ್ಲವೋ,ಯಾರಲ್ಲಿ ಆತ್ಮವಿಶ್ವಾಸ ಇರುವುದಿಲ್ಲವೋ ಅವರು ನಿಜವಾದ ವಿಕಲಚೇತನರು...ನನ್ನ ಕಾಲಲ್ಲಿ ಬಲ ಇಲ್ಲ ಅಷ್ಟೆ...ಆದರೆ ಮನಸ್ಸಿನಲ್ಲಿ ಬಲ ಇದೆ...ನನ್ನಲ್ಲಿ ಆತ್ಮವಿಶ್ವಾಸ ಇನ್ನೂ ಸತ್ತಿಲ್ಲ..ಆದ್ದರಿಂದ ನಾನು ವಿಕಲಚೇತನೆ ಅಲ್ಲ....ನನ್ನನ್ನು ವಿಕಲಚೇತನೆ ಅಂತ ಕರೆಯಬೇಡಿ..." ಎಂದಾಗ ಆ ಸಭೆಯಲ್ಲಿ ಜೋರಾದ ಚಪ್ಪಾಳೆಯ ಸದ್ದು ಬಿಟ್ಟು ಬೇರೆ ಏನೂ ಕೇಳಲಿಲ್ಲ.   

7 comments:

  1. Once again... Very nice.... :-)

    ReplyDelete
  2. Once again... Very nice.... :-)

    ReplyDelete
  3. ನನ್ನ ಮಗಳು ವಿಕಲಚೇತನೆಯಲ್ಲ ವಿಶೇಷಚೈತನ್ಯದವಳು - tumba istaa aytu ee saalu. Olleya baravanige ninnalli ide. Munduvarisu :-)

    ReplyDelete