Wednesday 8 April 2015

ಮಿಠಾಯಿ ಯುದ್ದ

ಮಿಠಾಯಿ ಯುದ್ದ
"ಅಮ್ಮಾ...ಅಮ್ಮಾ...." ಒಳಗೆ ಬರುತ್ತಲೇ ಪ್ರಮೋದ್ ಅಮ್ಮನನ್ನು ಕೂಗಿದ."ತುಂಬಾ ಬಾಯಾರಿಕೆ ಆಗ್ತಾ ಇದೆ...ನೀರು ಬೇಕು" ಪ್ರಥಮ್ ಕೂಗಿದ.ಅಡಿಗೆ ಮನೆಯಲ್ಲಿ ಏನೋ ಕೆಲಸದಲ್ಲಿದ್ದ ವಸುಂಧರೆಗೆ ಮಕ್ಕಳ ಆಗಮನದ ಅರಿವಾಯಿತು.ಅದಾಗಲೇ ಏಪ್ರಿಲ್ ತಿಂಗಳ ನಡುಭಾಗವಾಗಿತ್ತು.ಬೇಸಿಗೆ ರಜೆಯ ಮಜಾದಲ್ಲಿ ಸಹೋದರರಾದ ಪ್ರಮೋದ್,ಪ್ರಥಮ್ ತೇಲುತ್ತಿದ್ದರು.ಮಟ ಮಟ ಮಧ್ಯಾಹ್ನದ ಉರಿಬಿಸಿಲಲ್ಲಿ ಆಟ ಆಡಿ ಬಂದ ಮಕ್ಕಳಿಗೆ ಅದಾಗಲೇ ಮಾಡಿದ ನಿಂಬೆಹಣ್ಣಿನ ಪಾನಕವನ್ನು ಫ್ರಿಡ್ಜನಿಂದ ತೆಗೆದು ಎರಡು ಲೋಟಕ್ಕೆ ಹಾಕಿ ಮಕ್ಕಳಿಗೆ ತಂದು ಕೊಟ್ಟಳು ವಸುಂಧರ ಶ್ರೀಧರ್.ಪಾನಕವನ್ನು ಗಟಗಟನೆ ಕುಡಿದ ಮಕ್ಕಳು "ಅಮ್ಮಾ....." ಎಂದು ರಾಗ ಎಳೆದರು. "ಅಷ್ಟೇ ಮಾಡಿದ್ದು....ಇನ್ನು ಕುಡಿದರೆ ಊಟ ಯಾರು ಮಾಡದು.." ಎಂದು ಗದರಿಸಿದಳು.ಪ್ರಮೋದ್,ಪ್ರಥಮ್ ಒಬ್ಬರನೊಬ್ಬರ ಮುಖ ನೋಡಿಕೊಂಡು ಸುಮ್ಮನಾದರು. "ಅಪ್ಪ ಪೋನ್ ಮಾಡಿದ್ರು...ಈ ಶನಿವಾರ ನಾವು ಧರ್ಮಸ್ಥಳಕ್ಕೆ ಹೋಗುತ್ತಿದ್ದೀವಿ....ಶನಿವಾರ ಹೋಗಿ ಭಾನುವಾರ ಬರೋದು...ನೀವು ಬರ್ತಿರೋ ಇಲ್ವೋ??" ಮಕ್ಕಳು ಬಂದೇ ಬರುತ್ತಾರೆ ಎಂದು ಗೊತ್ತಿದ್ದರೂ ಪ್ರಶ್ನೆಯೊಂದನ್ನು ಇಟ್ಟಿದ್ದಳು ತಾಯಿ."ಅಯ್ಯೋ...ಬರ್ತೀವಿ ಅಮ್ಮ" ಎಂಬ ಒಕ್ಕೊರಲ ಧ್ವನಿ ಮಕ್ಕಳಿಂದ ಬಂತು.ಅಂದಿನಿಂದಲೇ ಪ್ರಮೋದ್ ಮತ್ತು ಪ್ರಥಮ್‍ರ ಪ್ರವಾಸದ ತಯಾರಿ ಪ್ರಾರಂಭವಾಯಿತು. ಶುಕ್ರವಾರ ರಾತ್ರಿ ಸೋದರರಿಬ್ಬರಿಗೂ ಸರಿಯಾಗಿ ನಿದ್ದೆಯೇ ಬರಲಿಲ್ಲ.ಮರುದಿನ ಬಸ್ಸಿನಲ್ಲಿ ಹೋಗುವ ಮಜಾವನ್ನು ನೆನೆದು ಮನಸ್ಸಿನಲ್ಲಿ ಏನೋ ಖುಷಿ.ಅಂತು ಬೆಳಕು ಹರಿಯಿತು.ಬಸ್ ಸ್ಟಾಂಡಿನಲ್ಲಿ ಬಸ್ಸು ಬಂದೊಡನೆ ಪ್ರಮೋದ್ ಮತ್ತು ಪ್ರಥಮ್ ಬಸ್ಸಿನ ಒಳಗೆ ಎಲ್ಲರಿಗಿಂತ ಮೊದಲು ಓಡಿ ಹೋಗಿ ಅಪ್ಪ ಹೇಳಿದಂತೆ ಬಸ್ಸಿನ ಮಧ್ಯಭಾಗದ ಎರಡು ಸೀಟುಗಳನ್ನು ಹಿಡಿದು ಕುಳಿತರು.ವಸುಂಧರ ಮತ್ತು ಶ್ರೀಧರ ಒಳಗೆ ಬರುತ್ತಿದ್ದಂತೆ "ಅಪ್ಪ...ಅಮ್ಮ..."ಎಂದು ಕೂಗುತ್ತಾ ತಮ್ಮ ಇರುವಿಕೆಯ ಸೀಟನ್ನು ತಿಳಿಯುವಂತೆ ಮಾಡಿದರು.ಮಕ್ಕಳಿಬ್ಬರು ಕಿಟಕಿ ಬದಿಯ ಸೀಟಿನಲ್ಲಿ ಕುಳಿತುಕೊಂಡರು.ಅಂತೆಯೇ ವಸುಂಧರ ಪ್ರಮೋದ್‍ನ ಪಕ್ಕ,ಶ್ರೀಧರ್ ಪ್ರಥಮ್‍ನ ಪಕ್ಕ ಕುಳಿತರು.ಬಸ್ಸು ಹೊರಟಿತು.ಸಹೋದರರಿಬ್ಬರ ಮನಸ್ಸಿನಲ್ಲಿ ಅದೇನೋ ಸಂತೋಷ.ಕಿಟಕಿಯ ಹೊರಗೆ ಹಿಂದಕ್ಕೆ ಸರಿಯುತ್ತಿರುವ ಮರಗಳನ್ನು,ಲೈಟಕಂಬಗಳನ್ನು ಕಂಡು ಅದೇನೋ ಖುಷಿ.ತಾವು ಚಲಿಸುತ್ತಿರುವ ಬಸ್ಸು ಯಾವುದಾದರು ವಾಹನವನ್ನು ಹಿಂದಕ್ಕೆ ಹಾಕಿದರಂತೂ ಸಂತೋಷವೋ ಸಂತೋಷ.ಅದೆಷ್ಟೋ ಸಲ ತಲೆ ಹೊರಗೆ ಹಾಕಿ ಹಿಂದಿನ ವಾಹನದವರಿಗೆ ಟಾಟಾ ಮಾಡಲು ತಂದೆ-ತಾಯಿಯರ ಬಳಿ ಬೈಸಿಕೊಂಡಿದ್ದೂ ಆಯಿತು.ಕೈಯಲ್ಲಿ ಚಿಪ್ಸ ಪ್ಯಾಕೆಟ್ ತಿನ್ನುತ್ತಾ ಅಣ್ಣ-ತಮ್ಮರಿಬ್ಬರು ಪ್ರಯಾಣವನ್ನು ಅನುಭವಿಸುತ್ತಿದ್ದರು.ಬಸ್ಸು ಮಧ್ಯದಲ್ಲಿ ತಿಂಡಿಗೆಂದು ನಿಲ್ಲಿಸಿದರು.ಶ್ರೀಧರ ತನ್ನ ಚಿಕ್ಕ ಮಗ ಪ್ರಥಮ್‍ನನ್ನು ಕರೆದುಕೊಂಡು ಕೆಳಗೆ ಇಳಿದನು.ಪ್ರಮೋದ್ ಬರಲು ನಿರಾಕರಿಸಿದ್ದರಿಂದ ಆತನಿಗೆ ಬೇಕಾದ ತಿಂಡಿಗಳನ್ನು,ಆತ ಹೇಳಿದ ಜ್ಯೂಸನ್ನು ತೆಗೆದುಕೊಂಡರು.ಕಡೆಯಲ್ಲಿ ಚಿಲ್ಲರೆ ಸರಿಮಾಡಲು ಅಂಗಡಿಯವನು ಕಡಲೆ ಮಿಠಾಯಿಯೊಂದನ್ನು ಕೊಟ್ಟನು.ಅದನ್ನು ಶ್ರೀಧರ ತನ್ನ ಜೊತೆಗಿದ್ದ ಪ್ರಥಮನಿಗೆ ಕೊಟ್ಟನು.ಆತ ಅದನ್ನು ಬಾಯಲ್ಲಿ ಇಟ್ಟುಕೊಂಡು ಬಸ್ಸು ಹತ್ತಿದನು.ಬಸ್ಸು ಅದಾಗಲೇ ಹೊರಟಿತ್ತು. ಅಣ್ಣ ಹೇಳಿದ ತಿಂಡಿಗಳನ್ನೆಲ್ಲ ಆತನಿಗೆ ಕೊಟ್ಟ ಪ್ರಥಮ್.ಆದರೆ ಪ್ರಮೋದನ ಕಣ್ಣು ಮಾತ್ರ ತಮ್ಮನ ಕೈಯಲ್ಲಿದ್ದ ಕಡ್ಲೆ ಮಿಠಾಯಿಯ ಮೇಲೆ ಬಿತ್ತು."ನಂಗೆ ಕಡ್ಲೆ ಮಿಠಾಯಿ...." ಪ್ರಮೋದನ ರಾಗ."ಒಂದೆ ಇದ್ದಿದ್ದು...ಅದಕ್ಕೆ ಅವನಿಗೆ ಕೊಟ್ಟೆ..." ಶ್ರೀಧರ ಹೇಳಿದ. "ಇನ್ನೊಂದು ತರಬಾರದ್ದಿತೇನ್ರಿ....."ಹೆಂಡತಿಯ ರಾಗ.ಅದಕ್ಕೆ ಚಿಲ್ಲರೆ ಸಿಗದಿದ್ದ ಕಾರಣದಿಂದ ಆ ಮಿಠಾಯಿ ತಂದದ್ದಾಗಿ ಹೇಳಿದನು.ಇದನ್ನು ಕೇಳಿದರು ಪ್ರಮೋದನಿಗೆ ಸಂತೋಷವಾಗಲಿಲ್ಲ."ನಂಗೂ ಕಡ್ಲೆ ಮಿಠಾಯಿ ಬೇಕು..." ಎಂದು ಹಠ ಹಿಡಿದಿದ್ದ. "ಆಯ್ತು ಮುಂದಿನ ಸ್ಟಾಪ್ ಬಂದಾಗ ಕೊಡಿಸ್ತೀನಿ" ಎಂದ ಶ್ರೀಧರ. "ಇಲ್ಲ..ನನಗೆ ಈಗಲೇ ಬೇಕು..." ಎಂದು ಕೆಟ್ಟ ಹಠ ಹಿಡಿದಿದ್ದ ಪ್ರಮೋದ್.ಬಸ್ಸು ಅದಾಗಲೇ ಹೊರಟಾಗಿತ್ತು.ಶ್ರೀಧರನಿಗೆ ಕೆಟ್ಟ ಕೋಪ ಬಂತು.ಪ್ರಮೋದ್‍ನ ಬೆನ್ನಿಗೆ ಎರಡು ಬಾರಿಸಿದ.ಬೆನ್ನಿಗೆ ಬಿದ್ದದ್ದೇ ತಡ ಜೋರಾಗಿ ಅಳತೊಡಗಿದ.ಮತ್ತೊಮ್ಮೆ ಶ್ರೀಧರ ತನ್ನ ತೋರುಬೆರಳನ್ನು ಮಗನೆಡೆಗೆ ತೋರಿಸುತ್ತಾ "ಬಾಯಿ ಮುಚ್ಚು...ಉಸಿರು ಹೊರಗೆ ಬರಬಾರದು" ಎಂದ.ಪೆಟ್ಟಿನ ಭಯಕ್ಕೆ ಪ್ರಮೋದ್ ತನ್ನ ಕೈಯಿಂದ ಬಾಯನ್ನು ಮುಚ್ಚಿಕೊಂಡು ಬಿಕ್ಕಿ ಬಿಕ್ಕಿ ಅಳಲಾರಂಭಿಸಿದ.ಒಂದು ಕ್ಷಣ ಇಡೀ ಬಸ್ಸಿನ ಜನ ಇವರನ್ನೇ ನೋಡುತ್ತಿದ್ದರು. ಇದನ್ನೆಲ್ಲ ತದೇಕಚಿತ್ತದಿಂದ ನೋಡುತ್ತಿದ್ದ ಪ್ರಥಮ್‍ಗೆ ಏನೋ ಒಂದು ರೀತಿಯ ಭಯ ಉಂಟಾಯಿತು.ಅಳುತ್ತಿದ್ದ ಅಣ್ನನ ಮುಖವನ್ನೊಮ್ಮೆ ನೋಡಿದ.ಅಣ್ಣ ಅಳುತ್ತಲೇ ಇದ್ದ.ಬಿಕ್ಕಿ ಬಿಕ್ಕಿ ಅಳುತ್ತಿದ್ದ.ಪ್ರಥಮ್ ತನ್ನ ಕೈಯಲ್ಲಿದ್ದ ಅರ್ಧ ತಿಂದ್ದಿದ್ದ ಕಡ್ಲೆ ಮಿಠಾಯನ್ನು ಪೂರ್ತಿ ತಿನ್ನುವ ಮನಸ್ಸು ಮಾಡದೆ ಹೊರಗೆ ಬಿಸಾಕಿದ.ಅಳುತ್ತಿದ್ದ ಮಗನನ್ನು ತಾಯಿ ಅದೆಷ್ಟೋ ಬಾರಿ ಸಮಾಧಾನ ಮಾಡಲು ಪ್ರಯತ್ನಿಸಿದರೂ ಅದು ಸಫಲವಾಗಲಿಲ್ಲ.ಪ್ರಮೋದ್‍ನಿಗೆ ಅಮ್ಮ,ಅಪ್ಪ,ತಮ್ಮ ಮೂವರ ಮೇಲೂ ಕೋಪ ಬಂದಿತ್ತು. ಬಸ್ಸು ಧರ್ಮಸ್ಥಳ ಬಂದಿತು.ಆದರೂ ಪ್ರಮೋದನ ಕೋಪ ಮಾತ್ರ ಕಡಿಮೆಯಾಗಿರಲಿಲ್ಲ.ಮೊದಲೇ ಕಾಯ್ದಿರಿಸಿದ್ದ ರೂಮಿಗೆ ನಾಲ್ವರೂ ತೆರಳಿ ಪ್ರಯಾಣದ ಆಯಾಸವನ್ನೆಲ್ಲಾ ತಣಿಸಿಕೊಂಡು ದೇವರ ದರ್ಶನಕ್ಕೆ ಹೊರಟರು.ಆದರೆ ಪ್ರಮೋದ್ ಮಾತ್ರ ಸಿಟ್ಟು ಕಡಿಮೆಯಾಗದೆ ಮುಖ ಗಂಟು ಹಾಕಿಕೊಂಡಿದ್ದ.ಸಿಟ್ಟು ಹೋದ ಮೇಲೆ ಅವನೆ ತಣ್ಣಗಾಗುತ್ತಾನೆ ಎಂದು ವಸುಂಧರ,ಶ್ರೀಧರ್ ಸುಮ್ಮನಾದರು.ಆದರೆ ಪ್ರಥಮ್ ಮಾತ್ರ ಪ್ರತಿ ಸಲ ಅಣ್ಣ ಎಂದು ಮಾತನಾಡಿಸಲು ಹೋಗಿ ವಿಫಲನಾಗುತ್ತಿದ್ದ. ಬಹಳ ಹೊತ್ತು ಸರದಿಯಲ್ಲಿ ನಿಂತ ಮೇಲೆ ಮಂಜುನಾಥ ಸ್ವಾಮಿ ಹಾಗೂ ಪರಿವಾರ ದೇವರ ದರುಶನವಾಯಿತು.ಅದಾಗಲೇ ಸಮಯ ರಾತ್ರಿ ಸುಮಾರು ಏಳು ಗಂಟೆ. ನಾಲ್ವರು ರಥಬೀದಿಯಲ್ಲಿ ತಿರುಗುತ್ತಿದ್ದರು.ಬಹಳ ದೊಡ್ಡ ಜನಸಂದಣಿ ಇದ್ದದ್ದರಿಂದ ಪ್ರಮೋದ್‍ನ ಕೈಯನ್ನು ವಸುಂಧರ,ಪ್ರಥಮ್‍ನ ಕೈಯನ್ನು ಶ್ರೀಧರ್ ಗಟ್ಟಿಯಾಗಿ ಹಿಡಿದುಕೊಂಡು ಹೋಗುತ್ತಿದ್ದರು.ಪ್ರಥಮ್ ಅಪ್ಪನ ಬಳಿ ಅದು ಇದು ಪ್ರಶ್ನೆ ಕೇಳಿಕೊಂಡು ಮುಂದೆ ಹೋಗುತ್ತಿದ್ದರೆ ತಾಯಿ-ಮಗ ಹಿಂದೆ ಹೋಗುತ್ತಿದ್ದರು.ಪ್ರಮೋದ್‍ಗೆ ಅಮ್ಮನ ಕೈ ಹಿಡಿದುಕೊಂಡು ನಡೆಯಲು ಸುತರಾಂ ಇಷ್ಟವಿರಲಿಲ್ಲ.ಅದಕ್ಕೆ ಕಾರಣ ಅವನ ಸಿಟ್ಟು.ಒಂದೆರಡು ಸಲ ಬಿಡಿಸಿಕೊಂಡ.ಆದರೂ ಅಮ್ಮನಿಗೆ ಅದರ ಅರಿವಾಗಿ ಅವನ ಕೈಯನ್ನು ಮತ್ತೆ ಹಿಡಿದುಕೊಳ್ಳುತ್ತಿದ್ದಳು.ಆದರೆ ಈ ಬಾರಿ ಅವನು ಕೈ ಬಿಡಿಸಿಕೊಂಡಿದ್ದಾಗ ಅದು ಅವಳ ಅರಿವಿಗೆ ಬರಲಿಲ್ಲ.ಆದರೂ ಅವನು ಅವರನ್ನೇ ಹಿಂಬಾಲಿಸುತ್ತಿದ್ದ. ಯಾವುದೋ ಅಂಗಡಿಯಲ್ಲಿ ಆಟಿಕೆಯೊಂದನ್ನು ನೋಡುತ್ತಾ ಪ್ರಮೋದ್ ಅಲ್ಲಿಯೇ ನಿಂತುಬಿಟ್ಟಿದ್ದ.ಇದರ ಅರಿವಿಲ್ಲದ ಅವನ ಅಪ್ಪ,ಅಮ್ಮ,ತಮ್ಮ ಮುಂದೆ ಸಾಗಿದರು.ಆ ಆಟಿಕೆಯ ಸೌಂದರ್ಯವನ್ನು ಕಣ್ತುಂಬಿಕೊಂಡ ಮೇಲೆ ಮುಂದೆ ಹೋಗಲು ನೋಡಿದ.ಆದರೆ ಈತನ ಕಡೆಯವರು ಯಾರು ಕಾಣಲಿಲ್ಲ.ಪ್ರಮೋದ್‍ನ ಎದೆಯ ಬಡಿತ ಜೋರಾಯಿತು.ಸುತ್ತಲೂ ನೋಡಿದ.ಎಲ್ಲೆಲ್ಲೂ ಜನ,ಆದರೆ ಯಾರು ತನ್ನವರಲ್ಲ.ಮನಸ್ಸು ಬಂದ ಕಡೆ ಅಳುತ್ತಾ ಓಡಿದ."ಅಪ್ಪ...ಅಮ್ಮ....ಪ್ರಥು.." ಎಂದು ಕೂಗುತ್ತಾ ಓಡಿದ.ಮನಸ್ಸಿನಲ್ಲಿ ಭಯ ಆವರಿಸಿತು.ಏನು ಮಾಡಬೇಕೋ ತಿಳಿಯದೆ ಅಲ್ಲೇ ನಿಂತುಬಿಟ್ಟ.ಹೌದು ಏಳು ವರ್ಷದ ಪ್ರಮೋದ್ ಕಳೆದುಹೋಗಿಬಿಟ್ಟಿದ್ದ.ಅಲ್ಲೇ ನಿಂತಿದ್ದ ಪೋಲಿಸಿಗೆ ಈ ಅಳುವ ಹುಡುಗ ಕಂಡು ಹತ್ತಿರ ಬಂದ.ವಿಷಯದ ಅರಿವಾಗಲು ಪೋಲಿಸಿಗೆ ಹೆಚ್ಚು ಹೊತ್ತು ಬೇಕಾಗಲಿಲ್ಲ.ಪ್ರಮೋದನನ್ನು ಅವನ ಅಪ್ಪ-ಅಮ್ಮನ ಬಳಿ ಸೇರಿಸುವುದಾಗಿ ಹೇಳಿ ಸ್ಟೇಷನ್‍ಗೆ ಕರೆದುಕೊಂಡು ಹೋದ. ಇತ್ತ ವಸುಂಧರ,ಶ್ರೀಧರ ಮತ್ತು ಪ್ರಥಮ್‍ಗೆ ಪ್ರಮೋದ್ ತಪ್ಪಿಸಿಕೊಂಡನೆಂದು ತಿಳಿಯಿತು.ಸಿಕ್ಕ ಸಿಕ್ಕ ಕಡೆಯಲ್ಲೆಲ್ಲಾ ಹುಡುಕಿದರು.ಸಿಕ್ಕ ಸಿಕ್ಕವರೆಲ್ಲರನ್ನೆಲ್ಲ ಕೇಳಿದರು.ಏನೂ ಪ್ರಯೋಜನವಾಗಲಿಲ್ಲ.ವಸುಂಧರಳಂತೂ ಮಗ ಕ್ಷೇಮವಾಗಿ ಸಿಕ್ಕರೆ ಅದು ಮಾಡಿಸುತ್ತೇನೆ,ಇದು ಮಾಡಿಸುತ್ತೇನೆ ಎಂದು ದೇವರಿಗೆ ಹರಕೆ ಹೊರಲು ಪ್ರಾರಂಭಿಸಿದಳು.ಇನ್ನು ಹುಡುಕಿ ಪ್ರಯೋಜನ ಇಲ್ಲ ಎಂದು ವಸುಂಧರ ಮತ್ತು ಪ್ರಥಮ್‍ರನ್ನು ರೂಮಿಗೆ ಕಳುಹಿಸಿ ತಾನು ಕಂಪ್ಲೇಂಟ್ ಕೊಟ್ಟು ಬರುವುದಾಗಿ ತಿಳಿಸಿದ. ರಥಬೀದಿಯಿಂದ ಪೋಲಿಸ್ ಸ್ಟೇಷನ್‍ಗೆ ಹೋಗುವ ದಾರಿಯುದ್ದಕ್ಕೂ ತನ್ನ ಮಗನಿಗೆ ಏನೂ ಆಗದಿದ್ದರೆ ಸಾಕು ಎಂದುಕೊಂಡೆ ತನ್ನ ನಡಿಗೆಯ ವೇಗ ಹೆಚ್ಚಿಸಿದ.ಸ್ಟೇಷನ್‍ಗೆ ಕಾಲಿಡುತ್ತಿದ್ದಂತೆ ಅಳುತ್ತಾ ಕುಳಿತಿದ್ದ ಪ್ರಮೋದ್ "ಅಪ್ಪಾ......" ಎನ್ನುತ್ತಾ ಓಡಿ ಬಂದು ಅಪ್ಪನನ್ನು ಬಳಸಿದನು.ಶ್ರೀಧರನಿಗೆ ಹೋದ ಜೀವ ಬಂದಂತಾಯಿತು.ಪೋಲಿಸರಿಗೆ ವಂದನೆಗಳನ್ನು ಹೇಳಿ ಮಗನನ್ನು ಕರೆದುಕೊಂಡು ರೂಮಿಗೆ ಹೋದನು. ಇತ್ತ ಶ್ರೀಧರನಿಗಾಗಿ ಕಾಯುತ್ತಿದ್ದ ತಾಯಿ,ಮಗನಿಗೆ ಮಗನೊಡನೆ ಬಂದ ಶ್ರೀಧರನನ್ನು ಕಂಡು ಸಂತೋಷವಾಯಿತು.ಒಳಗೆ ಬಂದವನೆ ಪ್ರಮೋದ್ ಅಪ್ಪ ಎಲ್ಲಿ ಹೊಡೆಯುತ್ತಾರೋ ಎಂಬ ಭಯದಿಂದ "ಅಪ್ಪ...ಪ್ಲೀಸ್ ಹೊಡಿಬೇಡಪ್ಪ...ಇನ್ನೊಂದು ಸಲ ಹೀಗೆ ಮಾಡಲ್ಲ....ಇನ್ನು ಎಲ್ಲಿ ಹೋಗೋದಿದ್ರು ನಿಮ್ಮ ಅಥವಾ ಅಮ್ಮನ ಕೈ ಹಿಡಿದುಕೊಂಡೆ ಇರ್ತೀನಿ...ಇನ್ನು ಯಾವತ್ತೂ ಸಿಟ್ಟು ಮಾಡಿಕ್ಕೊಳಲ್ಲ.." ಎಂದು ತನ್ನ ಕೈ ಮುಗಿದುಕೊಂಡು ಅಳಲಾರಂಭಿಸಿದನು.ಅವನ ಕೈ ಕಾಲುಗಳು ನಡುಗುತ್ತಿದ್ದವು.ಅಪ್ಪನಿಗೆ ಪರಿಸ್ಥತಿಯ ಅರಿವಾಯಿತು."ಪುಟ್ಟ...ಅಳಬೇಡ....ನಾನು ನಿಂಗೆ ಹೊಡಿಯಲ್ಲಾ...ಅಲ್ಲಾ ನೀನು ಎಲ್ಲಾದ್ರು ತಪ್ಪಿಸಿಕೊಂಡು ಬಿಟ್ಟಿದ್ರೆ ನಾನು,ಅಮ್ಮ,ಪ್ರಥು ಏನು ಮಾಡಬೇಕಿತ್ತು...ಇರಲಿ ಬಿಡು...ಅಳಬೇಡ" ಎಂದು ಅವನ ಕಣ್ಣೀರು ಒರೆಸುತ್ತಾ ಸಮಾಧಾನ ಮಾಡಿದನು. ಇದನ್ನೆಲ್ಲಾ ನೋಡುತ್ತಿದ್ದ ಪ್ರಥಮ್‍ನಿಗೆ ತಾನೇ ಇದಕ್ಕೆಲ್ಲ ಕಾರಣ ಎಂದು ಭಾಸವಾಗಿ ಅಣ್ಣನ ಬಳಿ ಬಂದು "ಅಣ್ಣಾ....ನಾನು ಇನ್ನು ಯಾವತ್ತೂ ನಿನಗೆ ಕೊಡದೆ ಏನೂ ತಿನ್ನಲ್ಲ....ನನಗೆ ಏನಾದರು ಸಿಕ್ಕಿದ್ರು ಅದು ನಿನಗೆ ಬೇಡ ಅಂದ್ರೆ ಮಾತ್ರ ನಾನು ತಿನ್ನುತ್ತೀನಿ...ಪ್ಲೀಸ್ ನಮ್ಮನ್ನು ಬಿಟ್ಟು ಹೋಗಬೇಡ" ಎಂದು ಹೇಳಿದನು.ಪ್ರಮೋದನಿಗೆ ತನ್ನ ಪುಟ್ಟ ತಮ್ಮನ ಮಾತುಗಳನ್ನು ಕೆಳಿ ಏನು ಹೇಳಬೇಕೋ ತಿಳಿಯಲ್ಲಿಲ್ಲ.ತನ್ನ ತಮ್ಮನ ತಲೆಯನ್ನು ತನ್ನ ಎದೆಗೆ ಒರಗಿಸಿ "ಐ ಯಾಮ್ ಸಾರಿ ಪ್ರಥು....ಇನ್ನು ಯಾವತ್ತೂ ಹೀಗೆ ಮಾಡಲ್ಲ....ಐ ಯಾಮ್ ಸಾರಿ...."ಎಂದು ಹೇಳಿದನು.ಕಣ್ಣಿನಿಂದ ನೀರು ಧಾರಾಕಾರವಾಗಿ ಹರಿಯುತ್ತಿತ್ತು.ಈ ದೃಶ್ಯವನ್ನು ನೋಡುತ್ತಿದ್ದ ವಸುಂಧರ ಶ್ರೀಧರ್‍ರ ಕಣ್ಣುಗಳು ಒದ್ದೆಯಾಗಿದ್ದವು.

4 comments: