Sunday 19 April 2015

ತಲ್ಲಣಿಸದಿರು ಕಂಡ್ಯ ತಾಳು ಮನವೆ

ತಲ್ಲಣಿಸದಿರು ಕಂಡ್ಯ ತಾಳು ಮನವೆ
ಸೂರ್ಯ ಆಗ ತಾನೇ ಜಗವನ್ನು ಬೆಳಗಲು ಸಜ್ಜಾಗಿದ್ದ.ಮೊಬೈಲ್‍ನಲ್ಲಿ ಇಟ್ಟಿದ್ದ ಅಲಾರಂ ಬಡಿದುಕೊಳ್ಳತೊಡಗಿತು.ಇದು ಮೂರನೇ ಸಲ ಅದು ಬಡಿದುಕೊಳ್ಳುತ್ತಿರುವುದು.ಆದರೆ ಈ ಬಾರಿ ಹಿಂದಿನ ಎರಡು ಸಲದಂತೆ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ.ಒಲ್ಲದ ಮನಸ್ಸಿನಿಂದ ತಾನು ಮಲಗಿದ್ದ ಹಾಸಿಗೆಯಿಂದ ಎದ್ದ ಸುಪ್ರೀತ್.ಎಷ್ಟು ಮಲಗಿದರು ಸುಸ್ತು ಹೋಗುವುದೇ ಇಲ್ಲ.ದೈಹಿಕವಾಗಿ ಬಳಲಿದರೆ ಒಂದಿಷ್ಟು ನಿದ್ದೆ ಸಾಕು,ಆದರೆ ಬುದ್ದಿಯನ್ನು ಖರ್ಚು ಮಾಡಿ ಕೆಲಸ ಮಾಡುವ ಸಾಪ್ಟವೇರ್ ಇಂಜಿನಿಯರ್ ಸುಪ್ರೀತ್‍ಗೆ ಅಷ್ಟು ಬೇಗ ಹೋಗುವಂತಹ ಸುಸ್ತಲ್ಲ.ಬೇಗಬೇಗನೆ ನಿತ್ಯಕರ್ಮಗಳನ್ನು ಮುಗಿಸಿ ಮನೆಯಿಂದ ಹೊರಗೆ ಬರುವಷ್ಟರಲ್ಲಿ ಅದಾಗಲೇ ಏಳುವರೆ ಗಂಟೆ.ಒಂಬತ್ತು ಗಂಟೆಗೆ ಲಾಗಿನ್ ಆಗಬೇಕು ಎಂದುಕೊಂಡು ಬಸ್ಸು ನಿಲ್ದಾಣದ ಕಡೆಗೆ ಓಡತೊಡಗಿದನು ಸುಪ್ರೀತ್.ಬಸ್ಸು ಹಿಡಿದು ಒಂದಿಷ್ಟು ಜಾಗ ಮಾಡಿಕೊಂಡು ಬಸ್ಸಿನೊಳಗೆ ಹೋದನು.ಸಾರಿಗೆ ವ್ಯವಸ್ಥೆ ಮಾಡದ ತನ್ನ ಕಂಪನಿಯವರನ್ನು ಹಾಗು ಹೆಚ್ಚು ಬಸ್ಸುಗಳನ್ನು ಬಿಡದ ಸರ್ಕಾರವನ್ನು ಬೈದುಕ್ಕೊಳ್ಳುತ್ತಾ ನಿಂತನು.ತನ್ನ ಸ್ಟಾಪ್‍ನಲ್ಲಿ ಇಳಿದು ಬರಬರನೆ ತನ್ನ ಟೆಕ್‍ಪಾರ್ಕ್‍ನ ಕಡೆಗೆ ನೆಡೆದನು.ಅಂತು ಸರಿಯಾದ ಸಮಯಕ್ಕೆ ಲಾಗಿನ್ ಮಾಡಿ ಒಳಗೆ ಹೋಗಿ ಎದುರಿಗೆ ಸಿಕ್ಕವರಿಗೆಲ್ಲ ಒಂದು ಪ್ಲಾಸ್ಟಿಕ್ ನಗುವನ್ನು ಬೀರಿ,ತನ್ನ ಸ್ಥಳದಲ್ಲಿ ಕುಳಿತಾಗ ಏನೋ ಆನಂದ. ಮನಸ್ಸಿಗೆ ಏನನ್ನೋ ಸಾಧಿಸಿದ ಖುಷಿ.
ಇದು ಸುಪ್ರೀತ್‍ನೊಬ್ಬನ ಕಥೆ ಅಲ್ಲ.ನಾಲ್ಕು ಕಾಸಿನ ಸಂಪಾದನೆಗಾಗಿ ಮಹಾನಗರಗಳಿಗೆ ವಲಸೆ ಬಂದ ಅದೆಷ್ಟೋ ಐಟಿ ಹಕ್ಕಿಗಳ ಮುಂಜಾವು ಪ್ರಾರಂಭವಾಗುವುದು ಹೀಗೆ.ವಾರದ ಐದು ದಿನ ಕೆಲಸ.ವೀಕೆಂಡ್ ರಜೆ.ರಜೆಯ ದಿನಗಳಲ್ಲಿ ಸೂರ್ಯ ನೆತ್ತಿಗೆ ಬಂದ ಮೇಲೆ ಎಚ್ಚರ.ತಿಂಗಳ ಕೊನೆಯಲ್ಲಿ ಸಂಬಳ.ಸಿಕ್ಕ ಸಿಕ್ಕ ಕಡೆಯಲ್ಲಿ ಡೆಬಿಟ್ ಕಾರ್ಡಅನ್ನು ಉಜ್ಜಿ ಬೇಕು ಬೇಕಾದ್ದನೆಲ್ಲ ಕೊಂಡುಕೊಳ್ಳುವ ಭರಾಟೆಯಲ್ಲಿ ಈಗ ಸುಪ್ರೀತ್‍ನದ್ದು ಒಂದು ಪಾಲು.ಮೊದಮೊದಲು ಇದು ರುಚಿಸಿದರೂ,ಇತ್ತೀಚೆಗೆ ಆತನಿಗೆ ಏನೋ ಬೇಜಾರು.ಪ್ರತಿ ಸಲವು ಆತನಿಗೆ ತನ್ನ ಗುರುಗಳು ಹೇಳಿದ ಮಾತು ನೆನಪಾಗುತ್ತಿತ್ತು. 
ಸುಪ್ರೀತ್ ತನ್ನ ಕ್ಯಾಂಪಸ್ ಆದ ನಂತರ ಆ ವಿಷಯ ತಿಳಿಸಲು ತಾನು ಬಹಳ ಗೌರವಿಸುತ್ತಿದ್ದ ಹೈಸ್ಕೂಲ್ ಮೇಷ್ಟ್ರ ಮನೆಗೆ ಹೋಗಿದ್ದ.ತನ್ನ ಪ್ರಿಯ ವಿದ್ಯಾರ್ಥಿಗೆ ಕೆಲಸ ಸಿಕ್ಕ ವಿಷಯ ಕೇಳಿ ಖುಷಿ ಪಟ್ಟಿದ್ದರು.ಆದರೆ ಒಂದು ಕಿವಿ ಮಾತನ್ನು ಹೇಳಿದ್ದರು."ಸುಪ್ರೀತ್,ಧಾವಂತದ ಬದುಕು.ಓಟಕ್ಕೆ ಬಿದ್ದಿದ್ದೀಯಾ,ಜೀವನ ಚಿಕ್ಕದಾಗುತ್ತಾ ಹೋಗುತ್ತೆ." ಹೌದು ಆ ಮಾತು ಸುಪ್ರೀತ್‍ನ ವರ್ತಮಾನದ ಬದುಕಿಗೆ ಪ್ರಸ್ತುತವಾಗಿತ್ತು.
ಆಫೀಸಿನ ತನ್ನ ಚೇರ್‍ನಲ್ಲಿ ಆರಾಮವಾಗಿ ಕುಳಿತು ಕಂಪ್ಯೂಟರ್‍ನಲ್ಲಿ ನ್ಯೂಸ್ ಪೇಪರ್ ಓದುತ್ತಿದ್ದ ಸುಪ್ರೀತ್ ಇದ್ದಕ್ಕಿದ್ದ ಹಾಗೆ ಬೆಚ್ಚಿಬಿದ್ದನು.ಹೌದು ಅದಕ್ಕೆ ಕಾರಣ ಆತನ ಕಣ್ಣಿಗೆ ಬಿದ್ದ ಒಂದು ವಾರ್ತೆ.ಅದು ಸಾಪ್ಟವೇರ್ ಸಾಮ್ರಾಜ್ಯವನ್ನು ಹೊಕ್ಕಿದ್ದ ಲೇಆಫ್ ಎಂಬ ಅಸ್ಥಿರತೆ.ಅವಶ್ಯಕತೆ ಇಲ್ಲದವರನ್ನು ಮುಲಾಜಿಲ್ಲದೆ ಕಿತ್ತೆಸೆಯುವ ವ್ಯವಸ್ಥೆ ಅದು.ಯಾವುದೋ ಒಂದು ದೊಡ್ಡ ಕಂಪನಿಯಲ್ಲಿ ಅದೆಷ್ಟೋ ಜನರನ್ನು ಒಮ್ಮೆಲೇ ತೆಗೆದು ಹಾಕಿದ ಸುದ್ದಿ ನೋಡಿ ಬೆಚ್ಚಿಬಿದ್ದ.ಆ ಕಂಪನಿಯಲ್ಲಿ ತಾನು ಕೆಲಸ ಮಾಡದಿದ್ದರು ತಾನು ಅದೇ ಕ್ಷೇತ್ರದಲ್ಲಿ ಇದ್ದದ್ದೇ ಆತನ ಭಯಕ್ಕೆ ಕಾರಣ.ಇಡೀ ದಿನ ತನ್ನ ಕಂಪನಿಯವರು ಆ ರೀತಿ ತನ್ನನ್ನು ತೆಗೆದು ಹಾಕಿದರೆ ಏನಪ್ಪಾ ಗತಿ ಎಂದು ಮನಸ್ಸು ಒದ್ದಾಡುತ್ತಿತ್ತು.ಆ ದಿನ ಶುಕ್ರವಾರ.ಮೊದಲೇ ಮರುದಿನದ ವೀಕೆಂಡ್‍ಗೆ ಮನಸ್ಸು ಹಾತೊರೆಯುವುದರಿಂದ ಆ ದಿನ ಕೆಲಸವಾಗುವುದು ಅಷ್ಟಕಷ್ಟೆ.ಇದರ ಮಧ್ಯೆ ಈ ಲೇಆಫ್ ಭೀತಿ ಬೇರೆ,ಸುಪ್ರೀತ್ ಹೇಗೆ ತಾನೆ ಕೆಲಸ ಮಾಡಿಯಾನು.ಆರು ಗಂಟೆ ಆಗುವುದನ್ನೆ ಕಾಯುತ್ತಿದ್ದ.ಆರು ಗಂಟೆ ಆದೊಡನೇ ಕಂಪನಿಯಿಂದ ಹೊರಬಂದ.ಆದರೆ ಚಿಂತೆಯಿಂದ ಹೊರಬರಲು ಸಾಧ್ಯವಾಗಲಿಲ್ಲ.
ಮರುದಿನ ಎಚ್ಚರವಾದಾಗ ಅದಾಗಲೇ ಹನ್ನೆರಡು ಗಂಟೆಯಾಗಿತ್ತು.ಮಲಗಿಕೊಂಡೆ ಫಿಜಾದವರಿಗೆ ಕರೆ ಮಾಡಿ ಆರ್ಡರ್ ಮಾಡಿದನು.ಹಾಗೇ ಮಲಗಿದ್ದ ಅವನಿಗೆ ಮತ್ತೆ ಎಚ್ಚರವಾದದ್ದು ಫಿಜಾ ಡೆಲಿವರಿಯವನು ತನ್ನ ಮನೆಯ ಬಾಗಿಲು ತಟ್ಟಿದಾಗಲೇ.ಆತನಿಗೆ ದುಡ್ಡು ಕೊಟ್ಟು ಆತನ ಕೃತಕ ನಗುವಿಗೊಂದು ಪ್ಲಾಸ್ಟಿಕ್ ನಗುವನ್ನು ಬೀರಿದನು.
ಫಿಜಾ ತುಂಡೊಂದನ್ನು ಕೈಯಲ್ಲಿ ಹಿಡಿದುಕೊಂಡು ಮೊಬೈಲ್‍ನಲ್ಲಿ ಇದ್ದ ನ್ಯೂಸ್ ತಂತ್ರಾಂಶವನ್ನು  ತೆಗೆದು ನೋಡುತ್ತಿದ್ದನು.ಮತ್ತೆ ಅದೇ ಸುದ್ದಿ.ಮತ್ತೆ ಯಾವುದೋ ದೊಡ್ಡ ಕಂಪನಿಯಲ್ಲಿ ಅದೆಷ್ಟೋ ಜನರಿಗೆ ಪಿಂಕ್ ಸ್ಲಿಪ್.ಯಾಕೋ ಫಿಜಾವನ್ನು ಪೂರ್ತಿ ತಿನ್ನುವ ಮನಸ್ಸಾಗದೆ ಅರ್ಧಕ್ಕೆ ಬಿಟ್ಟುಬಿಟ್ಟನು ಸುಪ್ರೀತ್.
ಸೋಮವಾರ ಮತ್ತೆ ತನ್ನ ದಿನಚರಿ.ಆಫೀಸಿಗೆ ಹೋದವನಿಗೆ ಒಂದು ಆಶ್ಚರ್ಯ ಕಾದಿತ್ತು.ಈ ಬಾರಿ ನ್ಯೂಸ್‍ನಲ್ಲಿ ಬರುವುದು ತನ್ನ ಕಂಪನಿ.ಹೌದು ಈ ಸಲ ತಾನು ಕೆಲಸ ಮಾಡುತ್ತಿದ್ದ ಕಂಪನಿ ಕೆಲವು ಇಂಜಿನಿಯರ್‍ಗಳನ್ನು ತೆಗೆಯುವ ನಿರ್ಧಾರ ಮಾಡಿತ್ತು.ಕೆಲಸದಿಂದ ವಜಾ ಆದವರ ಇನ್‍ಬಾಕ್ಸಗೆ ಒಂದು ಮೇಲ್ ಬಂದಿದೆ ಎಂದು ಕೆಲವು ಸಹೋದ್ಯೋಗಿಗಳು ಮಾತನಾಡುತ್ತಿದ್ದರು.ಬೇಗಬೇಗನೆ ತನ್ನ ಕ್ಯಾಬಿನ್ ಕಡೆಗೆ ಓಡಿದನು.ತನ್ನ ಮೇಲ್‍ಬಾಕ್ಸ ತೆಗೆದನು.ಆ ತಣ್ಣಗಿನ ಎಸಿ ವಾತಾವರಣದಲ್ಲೂ ಮೈ ಬೆವರುತ್ತಿತ್ತು.
"ಓ ಮೈ ಗಾಡ್....ಇಟ್ ಹ್ಯಾಪನ್ಡ...." ಎಂದುಕ್ಕೊಳ್ಳುತ್ತಾ ಹಾಗೆಯೇ ಕುಳಿತುಬಿಟ್ಟನು ಸುಪ್ರೀತ್.ಲೇಆಫ್‍ನ ಗಾಳಿಗೆ ತತ್ತರಿಸಿದ ತರಗೆಲೆಗಳಲ್ಲಿ ಇವನೂ ಒಬ್ಬನಾಗಿದ್ದನು.ಸುಪ್ರೀತ್‍ಗೆ ತಲೆ ಸುತ್ತಿದಂತಾಯಿತು.ಮುಂದೇನು ಎಂಬ ಚಿಂತೆ ಕಾಡತೊಡಗಿತು.ಕಂಪನಿಯಿಂದ ಹೊರಬರುವ ಮುಂಚೆ ಎಲ್ಲಾ ಫಾರ್‍ಮಾಲಿಟಿಗಳನ್ನು ಮುಗಿಸಿ ಹೊರಬಂದನು.
ಹೊರಬಂದು ಸುತ್ತಲೂ ನೋಡಿದನು.ಎಲ್ಲರೂ ತನ್ನನ್ನೇ ನೋಡುತ್ತಿದ್ದಾರೆ ಎಂಬಂತೆ ಭಾಸವಾಯಿತು.ಬಸ್ಸಿನೊಳಗೆ ಕುಳಿತವನಿಗೆ ಈ ದಿನ ಸೀಟ್ ಸಿಕ್ಕಿದರೂ ಯಾಕೋ ಪ್ರತಿದಿನ ನಿಂತಾಗಲೇ ಬರುತ್ತಿದ್ದ ಮಂಪರು ಬರಲಿಲ್ಲ.ಏನು ಮಾಡಬೇಕೋ ತಿಳಿಯಲಿಲ್ಲ.ಇಷ್ಟು ದಿನ ಸ್ವರ್ಗದಂತ್ತಿದ್ದ ಬದುಕು ಈಗ ಬವಣೆಯಾಗಿತ್ತು.ಯಾಕೋ ದೇವಸ್ಥಾನಕ್ಕೆ ಹೋಗುವ ಮನಸ್ಸಾಯಿತು.ಬಸ್ಸಿನಿಂದ ಇಳಿದು ಹತ್ತಿರದಲ್ಲೇ ಇದ್ದ ರಾಯರ ಮಠಕ್ಕೆ ಹೋದನು.
ಮನಸ್ಸಿನಲ್ಲಿ ಭಕ್ತಿಯ ಬದಲು ಭಯ ತುಂಬಿತ್ತು.ಒಂದೆರಡು ಪ್ರದಕ್ಷಿಣೆ ಹಾಕಿ ಹಾಗೆಯೇ ಒಂದು ಕಡೆ ಕುಳಿತುಬಿಟ್ಟನು.ಮನಸ್ಸಿನ ಬೇಗೆಗೆ ರಾಯರ ಬಳಿಯೂ ಪರಿಹಾರವಿಲ್ಲ.ಮಠದಿಂದ ಹೊರಗಡೆ ಬಂದವನು,ತನ್ನ ಸುತ್ತಲೂ ಒಮ್ಮೆ ನೋಡಿದ.ಹೌದು ಅದೆಷ್ಟು ಜನ.ಅದೆಷ್ಟು ರೀತಿಯ ಬದುಕು.ಹಣವಿಲ್ಲದವರು,ವಿದ್ಯೆಯಿಲ್ಲದವರು,ಕೆಲವರು ಕೆಲವು ಅಂಗವೇ ಇಲ್ಲದವರು,ಎಲ್ಲರೂ ಬದುಕುತ್ತಿದ್ದರು.ಅದೇ ತನ್ನಲ್ಲಿ ಸ್ವಲ್ಪ ಗಳಿಕೆಯಿದೆ,ವಿದ್ಯೆ ಇದೆ,ಎಲ್ಲಾ ಅಂಗಗಳು ಸರಿ ಇದೆ.ತಾನು ಹೇಗಾದರೂ ಬದುಕುತ್ತೇನೆ ಎಂಬ ವಿಚಾರ ತಲೆಗೆ ಬಂದು ಬೇರೆ ಕೆಲಸ ಹುಡುಕುವ ನಿರ್ಧಾರ ಮಾಡಿದನು.ಈಗ ಮನಸ್ಸು ಸ್ವಲ್ಪ ತಣ್ಣಗಾಯಿತು.ಅದೇ ಹೊತ್ತಿಗೆ ರಾಯರ ಮಠದಿಂದ "ತಲ್ಲಣಿಸದಿರು ಕಂಡ್ಯ ತಾಳು ಮನವೇ....ಎಲ್ಲರನು ರಕ್ಷಿಪನು ಇದಕೆ ಸಂಶಯವೇ?........." ಎಂಬ ದಾಸವಾಣಿ ಕೇಳಿ ಮನಸ್ಸು ಹಗುರಾಯಿತು. 

No comments:

Post a Comment