Tuesday 8 September 2015

ಮಹಾ-ಮಳೆ

ಮಹಾ-ಮಳೆ

ಮಳೆ-ಮಹಾನಗರಗಳಲ್ಲಿ ವಾಸಿಸುವ ಬಹುತೇಕರಿಗೆ ಭಯ ಹುಟ್ಟಿಸುವ ಪದ.ಮಳೆ ಬಂತೆಂದರೆ ನೋಡಿದಲ್ಲೆಲ್ಲಾ ನೀರು.ನೀರು ಸಂಗ್ರಹವಾಗಲು ರಸ್ತೆಯ ಹೊಂಡಗಳು ಸಹಕಾರಿ.ತಗ್ಗು ಪ್ರದೇಶದ ಮನೆಗಳಿಗೆ ನೀರು ಕರೆಯದೆ ಬಂದ ಅತಿಥಿಗಳಂತೆ.ಕತ್ತಲಾದ ಮೇಲೆ ಮಳೆ ಬಂದರಂತೂ ರಾತ್ರಿ ಇಡೀ ನೀರು ಹೊರಗೆ ಹಾಕುವುದರಲ್ಲಿಯೇ ಕಳೆದುಹೋಗುತ್ತದೆ.ಕಾಂಕ್ರೀಟ್ ಕಾಡಿನಲ್ಲಿ ನೀರು ಹೋಗಲು ಜಾಗವಾದರೂ ಹೇಗೆ ಬರಬೇಕು?!.
ಮಹಾನಗರಗಳಲ್ಲಿ ಮಳೆಯ ಜೊತೆಗೆ ಬಳುವಳಿಯಾಗಿ ಸಿಗುವುದು ಟ್ರಾಫಿಕ್ ಜಾಮ್.ಮಳೆಯಾದಾಗ ಒಂದು ಮೈಲಿ ಹೋಗಲು ಒಂದು ಗಂಟೆ ಬೇಕಾಗುವ ಹಲವಾರು ಉದಾಹರಣೆಗಳು ಸಿಗುತ್ತವೆ.ಟ್ರಾಫಿಕ್ ಜಾಮ್‍ನಿಂದ ಎಲ್ಲಾ ರೀತಿಯ ಜನರೂ ಪೇಚಿಗೆ ಸಿಲುಕುತ್ತಾರೆ.ಆದರೆ ತುಂಬಾ ಒದ್ದಾಟ ನೆಡೆಸುವವರು ಕಾರಿನಲ್ಲಿ ಹೋಗುವವರು.ಟ್ರಾಫಿಕ್ ಜಾಮ್‍ಗಳು ಮಹಾನಗರಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಸಂಗತಿ.ಆಮೆಗತಿಯಲ್ಲಿ ಸಾಗುವ ವಾಹನಗಳ ಸಾಲು ಮಳೆ ಬಂದಾಗ ಬಸವನ ಹುಳುವಿನಂತೆ ಸಾಗುತ್ತವೆ.
     ಬಸ್ಸಿನಲ್ಲಿ ಚಲಿಸುವ ಜನರಿಗೆ ಮಳೆ ಬಂದರೆ ಬೆಚ್ಚಗಿನ ಅನುಭವ.ತುಂಬಿದ ಬಸ್ಸುಗಳು ಬೇರೆ ದಿನಗಳಲ್ಲಿ ಕಿರಿಕಿರಿ ಉಂಟುಮಾಡಿದರೂ ಮಳೆ ಬಂದಾಗ ಬೆಚ್ಚಗಿನ ಅನುಭವ ನೀಡುವುದಂತೂ ಸತ್ಯ.ಎಂದಿನಂತೆ ಕೂರಲು ಸೀಟ್ ಸಿಕ್ಕಿದವರು ಆರಾಮಾಗಿ ಮಳೆಯ ಮಜಾವನ್ನು ಅನುಭವಿಸಿದರೆ,ನಿಂತ ಕೆಲವರು ಹಸಿದ ತೋಳಗಳು ಉಳಿದ ಮಾಂಸಕ್ಕೆ ಕಾಯುವಂತೆ,ಯಾರದರೂ ಸೀಟಿನಲ್ಲಿ ಕುಳಿತವರು ಏಳುತ್ತಾರಾ ಎಂದು ಕಾಯುತ್ತಾರೆ.ಮತ್ತೆ ಕೆಲವರು ಇಯರ್ ಪೋನನ್ನು ಕಿವಿಗೆ ಇರಿಸಿಕೊಂಡು ತಮ್ಮಿಷ್ಟದ ಹಾಡುಗಳನ್ನೋ,ಎಫ್‍ಎಂ ಸ್ಟೇಷನ್ ಕೇಳಿಕೊಂಡು ಮಳೆಯ ಪರಿಯೇ ಇಲ್ಲದಂತೆ ಪ್ರಯಾಣಿಸುತ್ತಾರೆ.ಎಲ್ಲಾದರೂ ತುಂಬಾ ಟ್ರಾಫಿಕ್ ಜಾಮ್ ಎನಿಸಿದರೆ,ಬಸ್ಸಿನಿಂದ ಇಳಿದು ಆರಾಮಾಗಿ ಮಳೆಯಲ್ಲಿ ನೆನೆದುಕೊಂಡು ಅಥವಾ ಓಡಿಕೊಂಡು ಬಸ್ಸಿಗಿಂತ ಮುಂಚೆಯೇ ತಮ್ಮ ಮನೆ ಸೇರಿರುತ್ತಾರೆ.
ಬೈಕ್ ಅಥವಾ ಟೂ ವೀಲರ್ ಇಟ್ಟುಕೊಂಡಿರುವವರು ಸಂದಿಗಳಲ್ಲಿ ನುಸುಳಿ ಹೇಗೋ ಬಸ್ಸಿಗಿಂತಾ ಮೊದಲೇ ತಮ್ಮ ಮನೆಗಳನ್ನು ತಲುಪುತ್ತಾರೆ.ಮಳೆಯು ವಿಪರೀತವಾಗಿ ತಾಳ್ಮೆ ಕೆದಕಿದರೆ ಗಾಡಿಯನ್ನು ಬದಿಗೆ ಹಾಕಿ ಸ್ವಲ್ಪ ತಾಳ್ಮೆ ತಂದುಕೊಂಡು ಮಳೆ ಕೊಂಚ ಕಡಿಮೆಯಾದ ನಂತರ ತಮ್ಮ ಗಾಡಿಗಳನ್ನು ಏರಿ ಮತ್ತೆ ಪಯಣ ಮುಂದುವರಿಸುತ್ತಾರೆ.
ಬಸ್ಸು ಮತ್ತು ಬೈಕ್‍ಗಳಲ್ಲಿ ಹೋಗುವವರು ಮಳೆ ಬಂದಾಗ ಮಾತ್ರ ಕಾರು ಹೊಂದಿದವರಿಗಿಂತಾ ಅದೃಷ್ಟವಂತರಾಗಿರುತ್ತಾರೆ.ಕಾರು ಹೊಂದಿದವರು ಟ್ರಾಫಿಕ್ ಜಾಮ್‍ಗಳಲ್ಲಿ ಸಿಕ್ಕಿಬಿದ್ದರೆ ಕಥೆ ಮುಗಿದಂತೆಯೇ.ಕಾರಿನಲ್ಲಿಯೇ ಕುಳಿತು ಸಿಗ್ನಲ್ ಗ್ರೀನ್ ಆಗುವವರೆಗೆ ಕಾಯುವುದು.ಸ್ವಲ್ಪ ಮುಂದೆ ಹೋದ ನಂತರ ಮತ್ತೊಂದು ವಾಹನಗಳ ಸರತಿಯಲ್ಲಿ ಹೋಗಿ ನಿಲ್ಲುವುದು.ಆಗ ಇವರ ಸಹಾಯಕ್ಕೆ ಬರುವುದು ರೇಡಿಯೋ ಜಾಕಿಗಳ ಮಾತುಗಳು.ತಮಗಿಷ್ಟದ ರೇಡಿಯೋ ಚಾನೆಲ್ ಅನ್ನು ಟ್ಯೂನ್ ಮಾಡಿ ರೇಡಿಯೋ ಜಾಕಿಗಳ ಮಾತುಗಳನ್ನು ಕೇಳಿಕೊಂಡು ಹೇಗೋ ಕಾಲ ಕಳೆಯುತ್ತಾರೆ,ಆರ್‍ಜೆಗಳು ಕೊಡುವ ಟ್ರಾಫಿಕ್ ಅಪ್‍ಡೇಟ್‍ಗಳನ್ನು ಕೇಳಿದಾಗ ಮನಸ್ಸಿಗೆ ಏನೋ ಸಮಾಧಾನ,ಮಳೆಯ ಅವಾಂತರದಿಂದ ಉಂಟಾದ ಟ್ರಾಫಿಕ್ ಜಾಮ್‍ನಲ್ಲಿ ಪೇಚಿಗೆ ಸಿಲುಕಿದವರು ತಮ್ಮಂತೆಯೇ ಅನೇಕರು ಇದ್ದಾರೆ ಎಂಬುದೇ ಆ ಸಮಾಧಾನಕ್ಕೆ ಕಾರಣ.ಕಾರು ಚಲಾಯಿಸಿಕೊಂಡು ಮನೆ ತಲುಪುವುದರಲ್ಲಿ ಸಾಕುಸಾಕಾಗಿ ಹೋಗುತ್ತದೆ.
ಮುಂದೆ ಇರುವ ವಾಹನಗಳನ್ನು ಎಚ್ಚರಿಸಲು ಕೆಲವು ವಾಹನ ಸವಾರರು ರಣಕಹಳೆಯನ್ನು ಊದುತ್ತಾರೆ.ಕರ್ಕಶವಾದ ಸದ್ದು ಹಲವರಿಗೆ ಕಿರಿಕಿರಿ ಉಂಟುಮಾಡುವುದಂತೂ ಸತ್ಯ.ಇನ್ನು ಪಾದಚಾರಿಗಳ ಮೇಲೆ ನೀರನ್ನು ಹಾರಿಸಿಕೊಂಡು ಹೋಗುವ ವಾಹನಗಳು ಯಾವುದೋ ಅಮ್ಯುಸ್‍ಮೆಂಟ್ ಪಾರ್ಕಿನ ಅನುಭವ ಕೊಡುವುದು ಖಂಡಿತ.ಮನೆಗೆ ತಲುಪಿದ ಕೂಡಲೇ ಸ್ನಾನ ಮಾಡಲೇಬೇಕಾದ ಅನಿವಾರ್ಯತೆ ಎದುರಾಗಬಹುದು.ಇನ್ನು ರಸ್ತೆಗಳಲ್ಲಿ ನಿಂತ ರಾಶಿ ನೀರಿನ ಮೇಲೆ ವಾಹನಗಳು ಹೋದರೆ ಆ ನೀರು ಸಮುದ್ರದ ಅಲೆಗಳು ದಡಕ್ಕೆ ಅಪ್ಪಳಿಸಿ ಮತ್ತೆ ಹಿಂದಕ್ಕೆ ಹೋಗುವಂತೆ,ಪುಟ್‍ಪಾತ್‍ನ ಕಂಪೌಂಡ್‍ಗಳಿಗೆ ತಾಗಿ ಮತ್ತೆ ವಾಪಸ್ ಬರುತ್ತವೆ.
ಜನರೇ ಓಡಾಡಲು ಕಷ್ಟವಾಗುವ ಮಹಾನಗರಗಳಲ್ಲಿ ನೀರು ಎಲ್ಲಿ ತಾನೇ ಹೋಗಲು ಸಾಧ್ಯ?ಸಿಕ್ಕ ಸಿಕ್ಕ ಸಂದಿಗಳಲ್ಲಿ ತೋರಲು ಮಳೆಯ ನೀರಿಗೂ ಸ್ವಲ್ಪ ಸಮಯ ಬೇಕಾಗುವುದು ಸತ್ಯವೇ ಸರಿ.ಒಟ್ಟಿನಲ್ಲಿ ಮಹಾ-ಮಳೆ(ಮಹಾನಗರಗಳಲ್ಲಿ ಬೀಳುವ ಮಳೆ)ಸೃಷ್ಟಿಸುವ ಅವಾಂತರ ಅದನ್ನು ಅನುಭವಿಸಿದವರಿಗೆ ಗೊತ್ತು.ಕಾಂಕ್ರೀಟ್ ಕಾಡಿನಲ್ಲಿ ಬದುಕುವ ನಾಗರೀಕರಿಗೆ ಮಳೆ ಎಂದರೆ ಸಣ್ಣಗೆ ನಡುಕ ಬರುವುದಂತೂ ಸತ್ಯ.

2 comments:

  1. Bengaloorina Paristitiyannu astu bega hege artha madikonde?

    ReplyDelete
    Replies
    1. Bengaloore haage yellavanna bega artha madisutte.....

      Delete