Saturday 19 September 2015

ಧಾವಂತ

ಧಾವಂತ

"ವಿನ್ಯಾಸವಿಲ್ಲ.....ಬರೀ ಧಾವಂತ.....ಕ್ಷಣದಲ್ಲಿ ಬದುಕು ಕಟ್ಟಿಕೊಳ್ಳಬೇಕು......" ಪ್ರಜ್ಞಾನಂದರಾಯರು ಹೇಳುತ್ತಲೇ ಒಳಗೆ ಬಂದರು."ನಗರದ ಬದುಕು....ನಾಗರೀಕರ ಬದುಕು....."  
    "ಶುರುವಾಯ್ತಾ ಅಪ್ಪಾ ನಿಂದು...."ಮಗಳು ಕ್ಷಿಪ್ರ ಗುಡುಗಿದಳು.ಅಪ್ಪನ ಪ್ರಜ್ಞೆಯ ಮಾತುಗಳು ಆಕೆಗೆ ಅಜೀರ್ಣ.ಅಲ್ಲದೆ ಪ್ರಜ್ಞಾನಂದರಾಯರು ಯಾವಾಗಲೂ ಇಂತಹ ಏನಾದರೂ ವಿಷಯವನ್ನು ಹೇಳುತ್ತಲೇ ಇರುತ್ತಾರೆ.ಯಾಕೋ ರಾಯರು ಮುಖ ಸಣ್ಣಗೆ ಮಾಡಿದರು.ಮಗಳಿಗೆ ಸ್ವಲ್ಪ ಇರುಸುಮುರುಸಾಗಿ "ಯಾಕಪ್ಪ....ಏನಾಯ್ತು??"
"ಏನಿಲ್ಲ ಪುಟ್ಟಾ....ಯಾಕೋ ಹೀಗೆ ಅನ್ನಿಸ್ತು...ನಿನ್ನ ಬದುಕು ಹಾಗೆ ಅಲ್ವ??"
"ಹೌದು ಅಪ್ಪಾ...ಇಲ್ಲಿ ಎಲ್ಲರ ಬದುಕು ಹಾಗೆ....ಇಲ್ಲಿ ಎಲ್ಲಾ ಫಾಸ್ಟ್ ಆಗಿ ಆಗಬೇಕು....ನಾವು ಹೊಂದಿಕೊಳ್ಳಲೇ ಬೇಕು..."
    "ಮಿತಿಯಿಲ್ಲದ ವೇಗ....ಅದೇ ಸಮಸ್ಯೆ...."ರಾಯರ ಮುಖದಲ್ಲಿ ನಗು.
"ಫಾಸ್ಟ್ ಪುಡ್ ಕಾಲ ಅಪ್ಪಾ ಇದು....ಇಲ್ಲಿ ನಿನಗೆ ಏನು ಬೇಕೋ ಅದು ಕ್ಷಣದಲ್ಲಿ ಸಿಗುತ್ತೆ..." ಕ್ಷಿಪ್ರ ಉತ್ತರಿಸಿದಳು.
"ಸುಖಕ್ಕೆ ಬರವಿಲ್ಲ.....ಆದರೆ ಸೌಖ್ಯಕ್ಕೆ...." ಮತ್ತೆ ನಕ್ಕರು ರಾಯರು.
    ಅಪ್ಪನ ಮಾತುಗಳು ಪುರಾಣ ಎನಿಸುತ್ತಿದ್ದ ಕ್ಷಿಪ್ರಾಳಿಗೆ ಅದೇಕೋ ಅಪ್ಪನ ಮಾತುಗಳು ಸರಿಯೆನಿಸತೊಡಗಿತು.ಹಾಗೆಯೇ ಅಪ್ಪನ ಮಾತು ಕೇಳುತ್ತಾ ಕುಳಿತುಬಿಟ್ಟಳು.
"ಬದುಕಿನಲ್ಲಿ ಯಾಂತ್ರಿಕತೆ ಬೇಕು...ಆದರೆ ಬದುಕೇ ಯಂತ್ರಿಕವಾದರೆ??ಅರ್ಥವಿರೋಲ್ಲ ಅಲ್ವ....."
ಕ್ಷಿಪ್ರಳಿಗೆ ಉತ್ತರ ತೋಚಲಿಲ್ಲ.ಮನಸ್ಸಿನಲ್ಲಿ ಏನೋ ತಳಮಳ.ತಿಂಗಳಿಗೆ ಆರಂಕಿಯ ಸಂಬಳ,ವಾಸಕ್ಕೆ ಒಂದು ಪ್ಲಾಟ್,ಆದರೂ ಬದುಕು ತುಂಬ ಸಣ್ಣದು ಎಂಬ ವಿಚಾರ ಅವಳನ್ನು ಸದಾ ಕಾಡುತ್ತಿತ್ತು.
"ಆದರೆ ಈಗಿನ ಬದುಕೇ ಹೀಗೆ ಅಪ್ಪ....ಯಾವಾಗಲೂ ಚುರುಕಾಗಿ ಇರಬೇಕು....ಸ್ವಲ್ಪ ನಿಧಾನವಾದರೂ ಹಿಂದೆ ಉಳಿದು ಬಿಡುತ್ತೇವೆ...." ಮಗಳ ಸಮರ್ಥನೆ.
"ಎಲ್ಲರಿಗೂ ತಾವೇ ಶ್ರೇಷ್ಠ ಅನ್ನೋ ಭಾವನೆ.....ಬೇರೆಯವರ ಭಾವನೆಗಳನ್ನು ಗೌರವಿಸಬೇಕು ಅನ್ನೋ ಕನಿಷ್ಠ ಸೌಜನ್ಯವು ಇಲ್ಲದವರು....ನಗರದ ಬದುಕು ನಾಗರೀಕರ ಬದುಕು" ಮತ್ತೆ ನಕ್ಕರು ರಾಯರು. "ನಮ್ಮಲ್ಲಿ ಇರುವ ಜ್ಞಾನ ಬೇರೆಯವರಲ್ಲಿ ಅಜ್ಞಾನ ಇದೆ ಅನ್ನೋದಕ್ಕೆ ಉಪಯೋಗವಾಗಬಾರದು....ಬದಲಿಗೆ ಅವರಲ್ಲಿ ಇರುವ ಅಜ್ಞಾನದ ಪೊರೆ ಕಳಚುವುದಕ್ಕೆ ಉಪಯೋಗವಾಗಬೇಕು...."
ಅಪ್ಪನ ಈ ಮತುಗಳು ಮಗಳಿಗೆ ತಪ್ಪು ಎನ್ನಲಾಗಲಿಲ್ಲ."ಆದರೆ....." ಸಮರ್ಥಿಸಿಕೊಳ್ಳಬೇಕು ಎಂದೆನಿಸಿದರು ಮಾತುಗಳು ಬರಲಿಲ್ಲ.
"ಒಂದೇ ಅಪಾರ್ಟ್‍ಮೆಂಟಿನಲ್ಲಿ ಇದ್ದರೂ ಪಕ್ಕದಲ್ಲಿ ಯಾರು ಇದ್ದಾರೆ ಅಂತಾನೆ ಗೊತ್ತಿರಲ್ಲ.....ಜಾಗತೀಕರಣದ ಮಾತು ಆಡುತ್ತೇವೆ.....ಆದರೆ ಜೀವನ ಎಷ್ಟು ಸಂಕುಚಿತವಾಗಿದೆ ಅಲ್ವ.....ಮನಸ್ಸಿನ ಭಾವನೆಗಳನ್ನು ಭಿತ್ತರಿಸುವುದಕ್ಕೆ ನೆರವಾಗುವ ಸಾಮಾಜಿಕ ಜಾಲತಾಣಗಳು,ಅದರ ಮೂಲಕವೇ ಆ ಭಾವನೆಗಳಿಗೆ ಪ್ರತಿಕ್ರಿಯೆಯೂ ಬಂದುಬಿಡುತ್ತದೆ....ಎಂತಹ ಸೋಜಿಗ ಅಲ್ಲವಾ..??" ಪ್ರಜ್ಞಾನಂದರಾಯರ ಪ್ರಜ್ಞೆಯ ಮಾತುಗಳು ಧಾವಂತದ ಬದುಕಿನಲ್ಲಿ ವಿಲೀನಳಾಗಿದ್ದ ಕ್ಷಿಪ್ರಳಿಗೆ ಯೋಚಿಸುವಂತೆ ಮಾಡಿತ್ತು.
"ಹೌದು ಅಪ್ಪಾ ಇಲ್ಲಿ ಎಲ್ಲಾ ಹೀಗೆ.....ಯಾರಿಗೂ ಸಮಯ ಇಲ್ಲ ಇದ್ದರೂ ತಾಳ್ಮೆ ಇಲ್ಲ..ತಂತ್ರಜ್ಞಾನ ಇಷ್ಟು ಮುಂದುವರಿದಿದೆ...ಹಾಗಾಗಿ ಆ ತಂತ್ರಜ್ಞಾನದ ಉಪಯೋಗ ಆಗುತ್ತಾ ಇದೆ ಅಷ್ಟೇ...." ಮಗಳ ಸಮರ್ಥನೆ.
"ಬರೀ ನಾಗರೀಕತೆ...ವಿಕಾಸ ಇಲ್ಲ.....ನಮ್ಮ ಹೊರಗೆ ಆಗುವುದು ನಾಗರೀಕತೆ....ಅದೇ ನಮ್ಮ ಒಳಗೆ ಆಗುವುದು ವಿಕಾಸ....ಹೊರಗೆ ಎಷ್ಟೇ ಝಗಮಗಿಸುವ ಬೆಳಕು ಇದ್ದರೂ ಮನಸ್ಸಲ್ಲಿ ಕತ್ತಲೆ ಇದ್ದರೆ ಅದು ಹಾಗೆ ಉಳಿದುಬಿಡುತ್ತೆ....ಅದೇ ಮನಸ್ಸು ಬೆಳಕಿನಲ್ಲಿ ಇದ್ದರೆ ಹೊರಗೆ ಕತ್ತಲಿದ್ದರೂ ಅಳಿಸುವ ಪ್ರಯತ್ನ ಮಾಡಬಹುದು....." ಉತ್ತರ ಕೊಡಲು ಕಷ್ಟವಾಗುವ ಪ್ರಶ್ನೆಗಳಿಗೆ ಕ್ಷಿಪ್ರಾಳ ಬಳಿ ಉತ್ತರವಿಲ್ಲ.
"ಆದರೆ ಇದಕ್ಕೆಲ್ಲಾ ಏನು ಪರಿಹಾರ ಅಪ್ಪ...ಬದಲಾವಣೆ ಆಗುವುದಾದರೂ ಹೇಗೆ??" ಏನೂ ತೋಚದ ಮಗಳು ಅಪ್ಪನ ಮಾತುಗಳು ಸರಿಯೆನಿಸಿ ಉತ್ತರದ ಮೊರೆ ಹೋದಳು.
"ಗೊತ್ತಿಲ್ಲ ಪುಟ್ಟಾ....ಇದು ಒಳ್ಳೆಯ ಬೆಳವಣಿಗೆ ಅಂತೂ ಅಲ್ಲ.....ಜಗಳವಾದರೆ ಅದನ್ನು ಚಿತ್ರೀಕರಿಸಿ ನಾಲ್ಕು ಜನರಿಗೆ ತೋರಿಸಿ ಪ್ರಶಂಸೆ ಗಿಟ್ಟಿಸಿಕೊಳ್ಳುವ ಮನೋಭಾವ ಹೋಗಬೇಕು....ವಿಕೃತಿ ಹೋಗಬೇಕು.....ವಿಕಾಸವಾಗಬೇಕು.....ಮನುಷ್ಯ ಮನುಷ್ಯನಾಗಿಯೇ ಉಳಿಯಬೇಕು....ಯಂತ್ರಗಳನ್ನು ತಯಾರು ಮಾಡುವ ಭರದಲ್ಲಿ ಮನುಷ್ಯನೇ ಯಂತ್ರವಾದರೆ ಕಷ್ಟ....ಬಹಳ ಕಷ್ಟ.......ನಗರದ ಬದುಕು...ನಾಗರೀಕರ ಬದುಕು" ಎಂದು ನಗುತ್ತಾ ರಾಯರು ನಿಟ್ಟುಸಿರುಬಿಟ್ಟರು.
ಆದರೆ ಕ್ಷಿಪ್ರಾಳ ತಳಮಳ ಹಾಗೆಯೇ ಉಳಿದುಬಿಟ್ಟಿತು.

2 comments:

  1. Ee nagarada anaagarika badukina bagge, adbuthavaagi chitrisiddiya.
    Konege uliyuva prashne, idakke parihaaravenu?

    ReplyDelete
  2. Houdu naavu odta ideevi yavdakku pursottilla Namge.. namma ee ota yavudakke Ella ide Nam hatra adroo enilla.. neevu heldange sukha ide soukhya illa, nagarikate ide vikaasa illa..

    ReplyDelete