Wednesday 2 March 2016

ಪುಂಗವ

ಪುಂಗವ
ಐದು ವರ್ಷಗಳ ಕೆಳಗೆ ಹೇಗಿತ್ತೋ ಈಗಲೂ ಹಾಗೆ ಇದ್ದ ತನ್ನ ಊರನ್ನು ಕಂಡು ವಿಶ್ವೇಶ್‍ಗೆ ಅದೇನೋ ಸಂತೋಷ.ಕಾಂಕ್ರೀಟಿಕರಣದ ಜಂಜಾಟಕ್ಕೆ ಬಲಿಬೀಳದೆ ಇನ್ನೂ ತನ್ನ ಸ್ವಂತಿಕೆಯನ್ನು ಇಟ್ಟುಕೊಂಡಿದ್ದ ಕೆಲವೇ ಊರುಗಳಲ್ಲಿ ವಿಶ್ವೇಶ್‍ನ ಊರು ಒಂದಾಗಿತ್ತು.ಅದೇ ತೆಂಗು,ಅಡಿಕೆಯ ತೋಟ.ಅಲ್ಲಲ್ಲಿ ಕಾಣುವ ಬಾಳೆಯ ಗಿಡಗಳು.ಮೊಬೈಲ್ ಟವರ್‍ಗಳ ಆಕ್ರಮಣಕ್ಕೆ ಸಿಲುಕದೆ ಇನ್ನೂ ತನ್ನ ಅಸ್ಥಿತ್ವವನ್ನು ಉಳಿಸಿಕೊಂಡಿರುವ ಗುಬ್ಬಚ್ಚಿಗಳು.ಅವುಗಳ ಆಶ್ರಯಕ್ಕೆ ನೆರವಾಗಿರುವ ಹಂಚಿನ ಮನೆಗಳು.ಹೀಗೆ ನಗರದ ಬದುಕಿನಲ್ಲಿ ಕಳೆದು ಹೋಗಿದ್ದ ವಿಶ್ವೇಶ್‍ಗೆ ಬೇರೆಯ ಪ್ರಪಂಚಕ್ಕೆ ಕಾಲಿಟ್ಟಂತೆಯೇ ಆಯಿತು.
ವಿಶ್ವೇಶ್‍ನ ನಿಜವಾದ ಹೆಸರು ವಿಶ್ವನಾಥ,ಆದರೆ ಇಂಜಿನಿಯರಿಂಗ್ ಮಾಡಿ ಕರ್ಪೋರೇಟ್ ಜಗತ್ತಿಗೆ ಕಾಲಿಟ್ಟ ವಿಶ್ವನಾಥನಿಗೆ ಜಗತ್ತೇ ಗೆದ್ದ ಅನುಭವ.ಹಾವ-ಭಾವ,ವೇಷ,ಭಾಷೆ ಎಲ್ಲಾ ಬದಲಾಯಿತು.ಅದಕ್ಕೆ ವಿಶ್ವನಾಥ ತನ್ನ ಹೆಸರನ್ನು ವಿಶ್ವೇಶ್ ಎಂದು ಬದಲಿಸಿಕೊಂಡಿದ್ದ.ಬೆಂಗಳೂರಿಗೆ ಹೋದ ಮೇಲಂತೂ ಅವನು ಊರಿಗೆ ಬರುವುದೇ ಅಪರೂಪವಾಗಿತ್ತು.ಕಾಂಕ್ರೀಟ್ ಕಾಡಿನಲ್ಲಿ ಬದುಕು ಕಟ್ಟಿಕೊಂಡಿದ್ದ ಅವನಿಗೆ ತನ್ನ ಊರನ್ನು ಒಮ್ಮೆ ಭೇಟಿ ಮಾಡಲು ಸುಮಾರು ಎಂಟು ವರ್ಷಗಳು ಬೇಕಾಯಿತು.ಅದಕ್ಕಾಗಿಯೇ ಹಸಿರ ಕಾಡು ಅವನಿಗೆ ಸ್ವರ್ಗದ ಅನುಭವ ನೀಡಿತು.
ಊರಿನ ಬೀದಿಗಳಲ್ಲಿ ಹೋಗುವಾಗ,ಹಳೆಯ ನೆನಪುಗಳು ಆತನ ಮೆದುಳಿನಲ್ಲಿ ಪ್ರವಹಿಸತೊಡಗಿದವು.ತಾನು ಓಡಾಡುತ್ತಿದ್ದ ಬೀದಿಗಳು,ತಾನು ಕಲಿತ ಶಾಲೆ ಹೀಗೆ ಒಂದೊಂದೆ ನೆನಪುಗಳು ತಲೆಯಲ್ಲಿ ಚಲಿಸತೊಡಗಿದವು.ಆತನ ಮೂವತ್ತು ಲಕ್ಷದ ಕಾರು ಮಾತ್ರ ಆ ಊರಿನ ಅರೆಕಾಂಕ್ರೀಟಿನ ರಸ್ತೆಗೆ ಅಷ್ಟಾಗಿ ಒಗ್ಗಿಕೊಳ್ಳಲಿಲ್ಲ.ಒಂದಷ್ಟು ಊರು ಸುತ್ತಿದ ಮೇಲೆ ಕಾರನ್ನು ಮನೆಯೊಂದರ ಮುಂದೆ ನಿಲ್ಲಿಸಿ ಕಾರಿನಿಂದ ಇಳಿದ.
"ಚಿದಾನಂದ....ಚಿದಾನಂದ...." ಹೆಸರು ಕೂಗುತ್ತಾ ತೆರೆದ ಬಾಗಿಲ ಒಳಗೆ ಹೋದ ವಿಶ್ವೇಶ್."ಯಾರು?" ಹೆಂಗಸೊಬ್ಬಳು ತನ್ನ ಕೈಯನ್ನು ಸೀರೆಗೆ ಒರೆಸಿಕೊಳ್ಳುತ್ತಾ ಬಂದಳು.
"ಚಿದಾನಂದ ಇಲ್ವಾ??ನಾನು ವಿಶ್ವೇಶ್ ಸಾರಿ ವಿಶ್ವನಾಥ ಅಂತಾ ಅವನ ಸ್ನೇಹಿತ..." ವಿಶ್ವೇಶ್ ಹೇಳಿದ.
"ನಮಸ್ಕಾರ...ಅವ್ರು ಇಲ್ಲ ತೋಟಕ್ಕೆ ಹೋಗಿದ್ದಾರೆ....ನೀವು ಕೂತುಕೊಳ್ಳಿ.." ಎಂದು ಸೋಫಾದತ್ತಾ ಬೆರಳು ಮಾಡಿ ತೋರಿಸಿದಳು."ಬಾಯಾರಿಕೆಗೆ ಏನು ಮಾಡ್ಲಿ?ಶರಬತ್ತಾ...??ಮಜ್ಜಿಗೆಯಾ...??" ಎಂದು ಮುಂದುವರೆಸಿದಳು."ಪರವಾಗಿಲ್ಲ...ಏನು ಬೇಡ.." ಎಂದ ವಿಶ್ವೇಶ್.
"ಸ್ವಲ್ಪ ಮಜ್ಜಿಗೆ ತರ್ತೀನಿ....ಬಿಸಿಲಿನ ದಣಿವು ಆರುತ್ತೆ..." ಎಂದು ಹೇಳುತ್ತಾ ಉತ್ತರಕ್ಕೆ ಕಾಯದೆ ಅಡುಗೆ ಮನೆಯ ಕಡೆಗೆ ಓಡಿದಳು.ವಿಶ್ವೇಶ್ ಸುತ್ತಲೂ ನೋಡಿದ.ಹಳೆಯ ಮನೆ.ಜಾಗಕ್ಕೆ ಬರವಿಲ್ಲದಷ್ಟು ವಿಶಾಲ.ದೊಡ್ಡ ದೊಡ್ಡ ಕಂಬಗಳು.ಅದಾಗಲೇ ಆತನ ನಗರದ ಒಂದು ಕೋಟಿಯ ಪ್ಲಾಟ್ ಆ ಮನೆಯ ಎದುರು ನಗಣ್ಯವಾದಂತೆ ಕಂಡಿತು.
"ತೊಗೊಳ್ಳಿ....ಅವರು ಇನ್ನೇನು ಬರಬಹುದು....ಹೇಳಿ ಕಳುಹಿಸಿದ್ದೀನಿ...." ಎಂದು ದೊಡ್ಡ ಸ್ಟೀಲ್ ಲೋಟವನ್ನು ವಿಶ್ವೇಶ್‍ಗೆ ಕೊಟ್ಟಳು ಅನಸೂಯ.ತಣ್ಣಗಿನ ಮಜ್ಜಿಗೆಯನ್ನು ಹೀರುತ್ತಾ ವಿಶ್ವೇಶ್ ಕೇಳಿದ "ತಾವು..??" "ನಾನು ಅನಸೂಯ....ಚಿದಾನಂದ ಅವರ ಹೆಂಡತಿ..." ಎಂದಳು.
"ಮದುವೆಯಲ್ಲಿ ನೋಡಿದ್ದು...ಹಾಗಾಗಿ ಮುಖ ಅಷ್ಟು ನೆನಪಿಲ್ಲ...." ಎನ್ನುವಾಗಲೇ "ವಿಶ್ವ...ವಿಶ್ವನಾಥ..." ಬಾಗಿಲಿನಿಂದ ದನಿಯೊಂದು ಕೇಳಿತು.
"ಹಾಯ್...ಚಿದಾನಂದ...ಹೇಗಿದ್ದೀಯಾ??" ಬಹು ವರ್ಷಗಳ ನಂತರ ಸಿಕ್ಕಿದ ಸ್ನೇಹಿತರು ಆಲಿಂಗಿಸಿಕೊಂಡರು."ನಾನು ಆರಾಮಿದ್ದೀನಿ...ನೀನು??" ಎಂದು ಪ್ರಶ್ನೆಯೊಂದಿಗೆ ಉತ್ತರ ಸೇರಿಸಿ ಕೇಳಿದ ವಿಶ್ವೇಶ್.ಹೀಗೆ ಉಭಯಕಶಲೋಪರಿಯ ಒಂದಷ್ಟು ಮಾತುಗಳ ನಂತರ "ಸರಿ...ಎಷ್ಟು ಜನ ಮಕ್ಕಳು ನಿಂಗೆ??" ವಿಶ್ವೇಶ್‍ನ ಪ್ರಶ್ನೆ.
"ಇಬ್ಬರು...ಒಂದು ಹೆಣ್ಣು...ಒಂದು ಗಂಡು...ನಿನಗೆ?" ಎಂದು ಪ್ರಶ್ನೆ ಇಟ್ಟ ಚಿದಾನಂದ."ಒಬ್ಬ ಮಗ...ಅಂಕುಶ್..." ಎಂದು ಹೇಳುವಾಗಲೇ,"ಅಪ್ಪಾ...
ಎಷ್ಟು ಹೊತ್ತಿಗೆ ಹೊರಡೋದು ಅಂತಾ ಅಮ್ಮ ಕೇಳ್ತಾ ಇದ್ದಾಳೆ..." ಎನ್ನುತ್ತಾ ಬಂದಳು ಸೌಪರ್ಣಿಕ."ಪುಟ್ಟಿ..ಬಾ ಇಲ್ಲಿ..ಈ ಮಾವನ ಹೆಸರು ವಿಶ್ವನಾಥ...ನನ್ನ ಗೆಳೆಯ..." ಎಂದು ಮಗಳಿಗೆ ಹೇಳುತ್ತಾ "ಇವಳು ನನ್ನ ಮಗಳು ಸೌಪರ್ಣಿಕ"ಎಂದು ವಿಶ್ವೇಶ್‍ಗೆ ತನ್ನ ಮಗಳನ್ನು ಪರಿಚಯಿಸಿದನು ಚಿದಾನಂದ.
"ಬಾಳೆಹಣ್ಣು ನಾಲ್ಕು ಗೊನೆ ತಂದು ಹೊರಗೆ ಇಟ್ಟಿದ್ದಾರೆ...ಹೊರಡುವಾಗ ಕಾರಿಗೆ ಹಾಕಿದರೆ ಸಾಕಲ್ಲ ಅಪ್ಪಾ.." ಎಂದು ಮಗ ಆತ್ರೇಯ ಚಿದಾನಂದನನ್ನು ಕೇಳಿದ."ಹಾ!!ಸಾಕು..." ಎಂದು ಹೇಳುತ್ತಾ "ಇವನು ನನ್ನ ಕೀರುತಿಗೆ....ಆತ್ರೇಯ..." ಎಂದು ಹೇಳುತ್ತಾ "ಇವನು ನನ್ನ ಸ್ನೇಹಿತ...ವಿಶ್ವನಾಥ" ಎಂದು ಪರಸ್ವರ ಪರಿಚಯಿಸಿದನು ಚಿದಾನಂದ.
  ಮಾತುಗಳ ನಡುವೆ ಪೋನ್ ರಿಂಗಣಿಸಿತು."ಎಕ್ಸಕ್ಯೂಸ್ ಮಿ.." ಎನ್ನುತ್ತಾ ವಿಶ್ವೇಶ್ ಇನ್ನ ಕಿಸೆಯಿಂದ ಅರವತ್ತು ಸಾವಿರದ ಸ್ಮಾರ್ಟ್‍ಪೋನ್ ತೆಗೆದು ಮಾತನಾಡಲಾರಂಭಿಸಿದನು.
"ನೋ...ನೋ...ಆಗಲ್ಲ...ಒಂದುವರೆ ಕೋಟಿ ಕಮ್ಮಿ ಒಂದು ರೂಪಾಯಿನೂ ಆಗಲ್ಲ....ಐ ಯಾಮ್ ಸಾರಿ..." ಎನ್ನುತ್ತಾ ತನ್ನ ಕರೆಯನ್ನು ಕಟ್ ಮಾಡಿ ಪೋನನ್ನು ಮತ್ತೆ ತನ್ನ ಕಿಸೆಯಲ್ಲಿ ಇಟ್ಟುಕೊಂಡನು.
"ಆಗಲ್ಲ ಅಂತ ಹೇಳಿದ್ರು..ಮತ್ತೆ ಮತ್ತೆ ತಲೆ ತಿಂತಾರೆ..." ಎಂದು ಗೊಣಗಿದ ವಿಶ್ವೇಶ್. "ಏನಾಯ್ತು??ಏನಾದರು ಸಮಸ್ಯೆನಾ??" ಎಂದು ಚಿದಾನಂದ ವಿಶ್ವೇಶ್‍ನ ಗೊಣಗಾಟದ ಕಾರಣಕ್ಕಾಗಿ ಪ್ರಶ್ನಿಸಿದ.
"ಏನಿಲ್ಲಾ...ನಾನು ಊರಿಗೆ ಬಂದಿದ್ದೆ ನಮ್ಮ ಆಸ್ತಿಯನ್ನೆಲ್ಲಾ ಮಾರಿ ಹೋಗಲಿಕ್ಕೆ.....ಸುಮಾರು ಒಂದೂವರೆ ಕೋಟಿ ಬೆಲೆಬಾಳೋ ಆಸ್ತಿ....ಅದನ್ನ ಕಡಿಮೆಗೆ ಕೊಡಿ ಅಂತಾ ಕೇಳ್ತಾರೆ....." ವಿಶ್ವೇಶ್ ತನ್ನ ಸಿಟ್ಟಿನ ಕಾರಣ ವಿವರಿಸಿದ.
"ಏನು ಊರಿನ ಆಸ್ತಿಯೆಲ್ಲಾ ಮಾರ್ತೀಯಾ...??" ಎಂದು ಚಿದಾನಂದ ಆಶ್ಚರ್ಯದಿಂದ ಕೇಳಿದ.
"ಹೌದು...ನನಗಂತೂ ಬೆಂಗಳೂರಲ್ಲಿ ಒಂದು ವಿಲ್ಲಾ ಇದೆ....ತಿಂಗಳಿಗೆ ಮೂರು ಲಕ್ಷ ಸಂಬಳ....ನನ್ನ ಮುಂದಿನ ಜೀವನವನ್ನು ಅಲ್ಲೇ ಕಳೆಯೋಣ ಅಂತಾ....ಈಗ ಊರಿಗೆ ಬಂದು ಇರೋದು ಅಂದ್ರೆ ಸ್ವಲ್ಪ ಕಷ್ಟ...ಅದಕ್ಕೆ ಊರಿನ ಆಸ್ತಿ ಮಾರಿ ಆರಾಮಾಗಿ ಇರೋಣ ಅಂತಾ...." ಎಂದು ತನ್ನ ನಿರ್ಧಾರವನ್ನು ಬಲಪಡಿಸಿಕೊಂಡೆ ಹೇಳಿದ ವಿಶ್ವೇಶ್.
"ಓ...ಹಾಗಾ...." ಚಿದಾನಂದ ಹೀಗೆನ್ನುವಾಗ."ರೀ...ಅಡಿಗೆ ರೆಡಿ....ಹೊರಡೋಣ ಅಂದರೆ ನಾನು ಬೇಗ ರೆಡಿ ಆಗ್ತೀನಿ.." ಎಂದು ಅನಸೂಯಳ ಸ್ವರ ಬಂದಿತು."ಸರಿ ಬೇಗ ಹೊರಡು....ಈಗ ಹೊರಟರೆ ಸರಿ ಆಗುತ್ತೆ..." ಎಂದ ಚಿದಾನಂದ.
"ಏನೋ ಕುಟುಂಬ ಸಮೇತ ಎಲ್ಲೋ ಹೊರಟ ಹಾಗೆ ಇದೆ....ಏನು ಔಟಿಂಗಾ??" ಎಂದು ವಿಶ್ವೇಶ್ ಕೇಳಿದ.
"ಇಲ್ಲಾ ಇಲ್ಲಾ ಹಾಗೇನು ಅಲ್ಲ...ಇವತ್ತು ನಮ್ಮ ಪುಟ್ಟಿ ಬರ್ತಡೇ...ಹಾಗಾಗಿ..."ಮಾತು ಮುಗಿಸುವ ಮುನ್ನವೇ "ಓಹ!ನೈಸ್...ಹ್ಯಾಪಿ ಬರ್ತ್‍ಡೇ ಸೌಪರ್ಣಿಕ..." ಎನ್ನುತ್ತಾ ಆ ಪುಟ್ಟ ಹುಡುಗಿಯ ಪುಟ್ಟ ಕೈ ಕುಲುಕುತ್ತಾ ಚೀರಿದನು ವಿಶ್ವೇಶ್. "ಎಷ್ಟು ವರ್ಷ ಪುಟ್ಟಿ..??" ಎಂದಾಗ "ಒಂಭತ್ತು.." ಎಂದಳು ಸೌಪರ್ಣಿಕ.
ಜೇಬಿನಿಂದ ತನ್ನ ಪರ್ಸನ್ನು ತೆಗೆದು ಸಾವಿರದ ಒಂದಷ್ಟು ನೋಟುಗಳನ್ನು ಆ ಹುಡುಗಿಯ ಕೈಯಲ್ಲಿ ಇಟ್ಟು "ಏನು ಬೇಕೋ ಅದು ತೊಗೋ" ಎಂದನು ವಿಶ್ವೇಶ್.
"ಗಿಪ್ಟ್ ನೀನು ಕೊಟ್ಟಿದ್ದೀಯಾ....ಪಾರ್ಟಿ ನಾವು ಕೊಡಿಸ್ತೀವಿ....ಇವತ್ತು ನಮ್ಮೆಲ್ಲರ ಊಟ ಹೊರಗೆ.." ಎನ್ನುತ್ತಾ ತಾವು ಹೋಗುತ್ತಿದ್ದ ಜಾಗಕ್ಕೆ ಹೃದಯತುಂಬಿ ಆಹ್ವಾನಿಸಿದನು ಚಿದಾನಂದ.
************************************************************************************
ಸುಮಾರು ಆರು ಮೈಲು ಸಾಗಿದರೂ ಇನ್ನು ಬಾರದ ಆ ಜಾಗವನ್ನು ಕಂಡು ವಿಶ್ವೇಶ್‍ಗೆ ಗೊಂದಲವಾಯಿತು.ಅದಾಗಲೇ ಆತ ಚಿದಾನಂದನ ಬಳಿ ಯಾವ ಸ್ಥಳಕ್ಕೆ ತಾವು ಹೋಗುತ್ತಿದ್ದೇವೆ ಎಂದು ಸಾಕಷ್ಟು ಬಾರಿ ಕೇಳಿದ್ದ."ಎಲ್ಲಿಗೆ ಹೋಗ್ತಿದ್ದೀವಿ??ರೆಸಾರ್ಟ್,ಮಾಲ್,ಹೋಟೆಲ್...ಯಾವ ಸ್ಥಳ ಅಂತನಾದ್ರು ಹೇಳು" ಎಂದು ವಿಶ್ವೇಶ್ ಮತ್ತೊಮ್ಮೆ ಕೇಳಿದ."ಇರು ಇನ್ನೇನು ಬಂದೆ ಬಿಟ್ಟಿತು..." ಎಂದು ಮತ್ತೊಮ್ಮೆ ಅದೇ ಉತ್ತರ ನೀಡಿದ ಚಿದಾನಂದ.
"ಬಂದೇ ಬಿಟ್ಟಿತು ನೋಡು..." ಎಂದು ತನ್ನ ಕಾರನ್ನು ನಿಲ್ಲಿಸಿದ ಚಿದಾನಂದ.
ವಿಶ್ವೇಶ್‍ನ ಕಾತರತೆ ಈಗ ಕೊನೆಯಾಗಿತ್ತು.ವಿಶಾಲವಾದ ಬಯಲಿನ ಮಧ್ಯದಲ್ಲಿ ಸುಮಾರು ಮೂರು ಅಂತಸ್ತಿನ ಮಳಿಗೆ.ಅಲ್ಲಲ್ಲಿ ಆಡುತ್ತಿರುವ ಪುಟ್ಟ ಪುಟ್ಟ ಮಕ್ಕಳು.ದೊಡ್ಡದಾದ ಬೋರ್ಡ್ ಒಂದರಲ್ಲಿ ಬರೆದು ಹಾಕಿದ್ದ "ವನಸುಮ" ಎಂಬ ಹೆಸರು ವಿಶ್ವೇಶ್‍ನ ಕಣ್ಣಿಗೆ ಬಿದ್ದಿತು.
    "ಏನೋ ಇದು ಸ್ಕೂಲಾ..??" ಎಂದು ವಿಶ್ವೇಶ್ ಪ್ರಶ್ನೆಯೊಂದನ್ನು ಮುಂದಿಟ್ಟ.
"ಅಲ್ಲವೋ..ಇದೊಂದು ಆಶ್ರಮ....ತಂದೆ-ತಾಯಿಯ ಪ್ರೀತಿ ಕಾಣದ ಮುದ್ದು ಮಕ್ಕಳು ಇಲ್ಲಿ ಬೆಳೀತಾರೆ...ನಾವು ಬರ್ತ್‍ಡೇ ಸೆಲಬ್ರೇಟ್ ಮಾಡದು..ಪಾರ್ಟಿ ಕೊಡಿಸೋದು ಎಲ್ಲಾ ಇಲ್ಲೇ..." ಎಂದು ತಾವು ತಂದಿದ್ದ ಒಂದೊಂದೇ ಸಾಮಾನುಗಳನ್ನು ಇಳಿಸುತ್ತಾ ಹೇಳಿದ ಚಿದಾನಂದ.
ನಗರದಲ್ಲಿ ತನ್ನ ಪ್ರತಿಷ್ಠಗೆ ಸರಿಹೊಂದುವರನ್ನು ಮಾತ್ರ ಕರದು,ಐಷಾರಾಮಿ ಜಾಗಗಳಲ್ಲಿ ಲೆಕ್ಕವಿಲ್ಲದಷ್ಟು ಹಣ ಚೆಲ್ಲುವುದನ್ನೇ ಆನಂದ,ಸಂತೋಷ ಎಂದು ಭಾವಿಸಿದ್ದ ವಿಶ್ವೇಶ್‍ನಿಗೆ ಏನೋ ಒಂದು ರೀತಿಯ ಆಶ್ಚರ್ಯ,ಜೊತೆಗೆ ತಳಮಳ.ಏನೂ ತೋಚದವನಂತಾಗಿ ಹಾಗೆ ನಿಂತುಬಿಟ್ಟ.
"ಅಪ್ಪಾ...ಇದು ತೊಗೋ ಅಂಕಲ್ ಕೊಟ್ಟ ದುಡ್ಡು....ಈ ಬರ್ತ್‍ಡೇ ಗೆ ನನ್ನ ಕಡೆಯಿಂದ ವನಸುಮಕ್ಕೆ..." ಎಂದು ಸೌಪರ್ಣಿಕ ಅಪ್ಪನಿಗೆ ವಿಶ್ವೇಶ್ ಕೊಟ್ಟ ಸಾವಿರದ ನೋಟುಗಳನ್ನು ಕೊಟ್ಟಳು.ಇದು ವಿಶ್ವೇಶ್‍ನಿಗೆ ಮತ್ತೊಂದು ಆಶ್ಚರ್ಯದ ಸಂಗತಿ.
ತನ್ನ ಮಗ ಯಾರಾದರು ನೀಡಿದ ಹಣವನ್ನು ಸ್ವಲ್ಪವೂ ಲೆಕ್ಕಿಸದೆ ತನಗೆ ಬೇಕು ಬೇಕಾದನ್ನು ಮನಬಂದಂತೆ ತೆಗೆದುಕೊಳ್ಳುತ್ತಿದ್ದ ತನ್ನ ಮಗನಿಗೂ ಈ ಹುಡುಗಿಗೂ ಅದೆಷ್ಟು ವ್ಯತ್ಯಾಸ.ಹಾಗೆ ನೋಡಿದರೆ ತನ್ನ ಮಗನೇ ಈಕೆಗಿಂತ ಎರಡು-ಮೂರು ವರ್ಷ ದೊಡ್ಡವನು.ಅದೇಕೆ ತನ್ನ ಮಗನಲ್ಲಿ ತಾನು ಇಂತಾ ದೊಡ್ಡ ಗುಣವನ್ನು ಕಾಣಲಿಲ್ಲ ಎಂದುಕೊಂಡು,ಅದು ಸರಿ ತನ್ನಲ್ಲಿ ಈ ಸಂಸ್ಕಾರ ಇದ್ದಿದ್ದರೆ ತನ್ನ ಮಗನಿಗೂ ಬರುತ್ತಿತ್ತು ಎಂದೆನಿಸಿ ಬೇಸರವಯಿತು.ಹಾಗೆ ಅಲ್ಲಿಯ ಮಕ್ಕಳನ್ನು ನೋಡುತ್ತಾ ನಿಂತುಬಿಟ್ಟ.
ಸಾಲುಸಾಲಗಿ ನಿಂತ ಆ ಮಕ್ಕಳನ್ನು ತನ್ನ ಮಕ್ಕಳಂತೆ ಕಾಣುತ್ತಿದ್ದ ಚಿದಾನಂದ ವಿಶ್ವೇಶ್‍ಗೆ ಬದುಕನ್ನು ಸಮರ್ಥವಾಗಿ ನೆಡೆಸುತ್ತಿರುವ ಪುಂಗವನಂತೆ ಕಂಡನು.ಪ್ರೀತಿಯಿಂದ ತಾವು ತಂದಿದ್ದ ಊಟವನ್ನು ಕುಟುಂಬ ಸಮೇತ ಬಡಿಸುತ್ತಿದ್ದದನ್ನು ನೋಡಿ ತನ್ನ ಬದುಕು ಅದೆಷ್ಟೋ ವರ್ಷಗಳ ಹಿಂದೆಯೇ ಸ್ತಬ್ಧವಾದಂತೆ ಭಾಸವಾಯಿತು.ಹಾಗೆಯೇ ಚಿದಾನಂದನ ಮುಖ ನೋಡುತ್ತಾ ನಿಂತಿದ್ದ ಅವನಿಗೆ "ವಿಶ್ವ...ಇಲ್ಲಿ ಬಾರೋ...ಸ್ವೀಟ್ ಹಾಕುವಂತೆ" ಎಂಬ ಚಿದಾನಂದನ ದನಿ ಎಚ್ಚರಿಸಿತು.
"ಮಾಮ...ಇನ್ನೊಂದು ಹಾಕ್ತೀರಾ.." ಎಂದು ಸುಮಾರು ಮೂರು-ನಾಲ್ಕು ವರ್ಷದ ಬಾಲಕಿಯೊಬ್ಬಳು ಕೇಳಿದಾಗ  ವಿಶ್ವೇಶ್ ಅವಳಿಗೆ ಮತ್ತೊಂದು ಸ್ವೀಟ್ ಬಡಿಸಿದ.ಆಗ ಆಕೆಯ ಮುಖದಲ್ಲಿ ಆದ ಸಂತೋಷವನ್ನು ಕಂಡು ಆತನ ಕಣ್ಣು ತುಂಬಿ ಬಂತು.ತನ್ನ ಮನೆ,ಕಾರು,ಪ್ರತಿಷ್ಟೆ ಎಲ್ಲ ಸೇರಿಸಿದರೂ ಸಿಗದಷ್ಟು ಖುಷಿಯಾಯಿತು ಆತನಿಗೆ.ಹಾಗೆಯೇ ನಿಂತವನಿಗೆ ಮತ್ತೆ ಎಚ್ಚರವಾದದ್ದು ಆತನ ಸ್ಮಾರ್ಟ್‍ಪೋನ್ ರಿಂಗಣಿಸಿದಾಗಲೇ.
ಆ ಕಡೆಯಿಂದ ಅದೇನೂ ಹೇಳಿದರೋ ಗೊತ್ತಿಲ್ಲ ಆದರೆ ಈ ಕಡೆಯಿಂದ ಮಾತ್ರ ವಿಶ್ವೇಶ್ ಗದ್ಗದಿತನಾಗಿ "ನಾನು ಯಾವ ಆಸ್ತಿಯನ್ನು ಮಾರಲ್ಲ...ಇನ್ನು ನಂಗೆ ಕಾಲ್ ಮಾಡಬೇಡಿ.." ಎಂದು ನಿಖರವಾಗಿ ಹೇಳಿದನು.
ಇದನ್ನೆಲ್ಲಾ ನೋಡುತ್ತಿದ್ದ ಚಿದಾನಂದ "ಏನಾಯ್ತೋ....?ಮತ್ತೆ ನಿನ್ನ ಬೆಲೆಗೆ ಒಪ್ಪಲಿಲ್ವ??" ಎಂದಾಗ "ಇಲ್ಲ ಕಣೋ ಈ ಬಾರಿ ಸರಿಯಾಗಿ ನಿರ್ಧಾರ ಮಾಡಿದ್ದೀನಿ...ನಾನು ಆ ಆಸ್ತಿ ಮಾರಲ್ಲ.....ಬದಲಿಗೆ ಈ ವನಸುಮಕ್ಕೆ ಬರೆದು ಕೊಡ್ತೀನಿ.....ಇದು ಈ ಮಕ್ಕಳಿಗೆ ಈ ಅಲ್ಪ ಮಾಡುತ್ತಿರುವ ಅಳಿಲು ಸೇವೆ.." ಎಂದು ಹೇಳುತ್ತಾ ಚಿದಾನಂದನ್ನು ಗಟ್ಟಿಯಾಗಿ ತಬ್ಬಿಕೊಂಡನು.
 

4 comments:

  1. ತುಂಬ ಚೆನ್ನಾಗಿ ಮೂಡಿ ಬಂದಿದೆ :-) ಆದಷ್ಟು ಹೆಚ್ಚು ಬರಿ ಮಗಾ. ಜಾಸ್ತಿ ಕಾಯಿಸಬೇಡ :-)

    ReplyDelete